ಕಾರ್ಕಳ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಿಂದೂಗಳ ಪಾಲಿನ ಬಲು ದೊಡ್ಡ ಕನಸಾಗಿತ್ತು. ಇದೀಗ ಆ ಕನಸು ನನಸಾಗುತ್ತಿರುವುದು ನಮ್ಮ ಪಾಲಿನ ಭಾಗ್ಯವೆಂದು ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳು ಮಹೇಶ್ ಶೆಟ್ಟಿ ಕುಡ್ಪುಲಾಜೆ ಅಭಿಪ್ರಾಯಪಟ್ಟರು.
ಅವರು ಆ. 4ರಂದು ತೆಳ್ಳಾರು ಜಲದುರ್ಗಾದೇವಿ ದೇಗುಲದ ವಠಾರದಲ್ಲಿ ಭಗವಧ್ವಜ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು. ಅದೆಷ್ಟೋ ವರ್ಷಗಳಿಂದ ಜಾತಿ, ಮತ ಭೇದವಿಲ್ಲದೇ ಹಿಂದೂಗಳೆಂದು ಒಗ್ಗೂಡಿ ಹೋರಾಟ ಮಾಡಿದ ಫಲವಾಗಿ ರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದೊಂದು ಐಸಿಹಾಸಿಕ ಕ್ಷಣವೆಂದು ಮಹೇಶ್ ಶೆಟ್ಟಿ ಹೇಳಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಜಿ.ಪಂ. ಸದಸ್ಯ ಉದಯ್ ಎಸ್. ಕೋಟ್ಯಾನ್, ನಗರ ಬಿಜೆಪಿ ಅಧ್ಯಕ್ಷ ಅನಂತಕೃಷ್ಣ ಶೆಣೈ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುಹಾಶ್ ಶೆಟ್ಟಿ, ದುರ್ಗಾ ಗ್ರಾ.ಪಂ. ಅಧ್ಯಕ್ಷೆ ದೇವಕಿ, ರಾಘವ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಜೀವ ದೇವಾಡಿಗ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸತ್ಯನಾಥ್ ಪಡ್ರೆ ವಂದಿಸಿದರು.