ಕಾರ್ಕಳ : ಬಿಲ್ಲವ ಸಮಾಜ ಸೇವಾ ಸಂಘ ಬಜಗೋಳಿ, ಯುವವಾಹಿನಿ ಕಾರ್ಕಳ ಘಟಕ ಹಾಗೂ ಯೂತ್ ಬಿಲ್ಲವ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಬಜಗೋಳಿ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಫೆ. 13ರಂದು ಬೃಹತ್ ರಕ್ತದಾನ ಶಿಬಿರ ನಡೆಯಿತು. ಉದ್ಯಮಿ ಸುಶಾಂತ್ ಬಜಗೋಳಿ ದೀಪ ಬೆಳಗಿಸಿ, ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರಕ್ತದಾನ ಶ್ರೇಷ್ಠದಾನಗಳಲ್ಲೊಂದು. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುವುದು. ರಕ್ತದಾನ ಶಿಬಿರ ಆಯೋಜನೆ ಮೂಲಕ ಅಗತ್ಯವುಳ್ಳವರಿಗೆ ಸುಲಭವಾಗಿ ರಕ್ತ ದೊರೆಯುವಂತಾಗುವುದು, ಸಂಘಟನೆಗಳು ಇಂತಹ ಶಿಬಿರ ಆಯೋಜಿಸುವ ಮೂಲಕ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವುದು ಪ್ರಶಂಸನೀಯ ಕಾರ್ಯವೆಂದರು.
ಉಡುಪಿ ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾ ರಕ್ತದಾನದ ಮಹತ್ವ ತಿಳಿಸಿದರು.
ಸನ್ಮಾನ
ಕೋವಿಡ್ ಸಂದರ್ಭದಲ್ಲಿ ಅತ್ಯುತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿರುವ ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಯಶೋಧರ್ ಹಾಗೂ ಬಜಗೋಳಿ ಮಾತಾ ಕ್ಲಿನಿಕ್ ನ ಡಾ. ಸುಕಿಂತಾ ಅನುಪ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 37ನೇ ಬಾರಿ ರಕ್ತದಾನ ಮಾಡಿರುವ ಸದಾನಂದ ಅಮೀನ್ ಅವರನ್ನು ಗೌರವಿಸಲಾಯಿತು.
ಬಜಗೋಳಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ನಲ್ಲೂರು ಇವರ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕಾರ್ಕಳ ಘಟಕ ಸ್ಥಾಪಕಾಧ್ಯಕ್ಷ ಸುಧಾಕರ್ ಕಾರ್ಕಳ, ಉದ್ಯಮಿ ಹರೀಶ್ ಸಾಲ್ಯಾನ್ ಕಡಾರಿ, ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಬಜಗೋಳಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಪೂಜಾರಿ, ಯುವವಾಹಿನಿ ಕಾರ್ಕಳ ಘಟಕದ ನಿಕಟಪೂರ್ವ ಅಧ್ಯಕ್ಷ ಗಣೇಶ್ ಸಾಲಿಯಾನ್, ಯೂತ್ ಬಿಲ್ಲವ ಕಾರ್ಕಳದ ಅಧ್ಯಕ್ಷ ಭರತ್ ಅಂಚನ್, ರಕ್ತದಾನ ಕಾರ್ಯಕ್ರಮದ ನಿರ್ದೇಶಕ ಸಂದೇಶ್ ಕೋಟ್ಯಾನ್, ಬಜಗೋಳಿ ಬಿಲ್ಲವ ಸಂಘದ ಉಪಾಧ್ಯಕ್ಷೆ ಪದ್ಮಾವತಿ ಅಮೀನ್, ಮಹಿಳಾ ವಿಭಾಗದ ಅಧ್ಯಕ್ಷೆ ಚಂದ್ರಕಲಾ, ನಲ್ಲೂರು ಸ. ಹಿ. ಪ್ರಾ. ಶಾಲೆಯ ಮುಖ್ಯಶಿಕ್ಷಕ ನಾಗೇಶ್ ಉಪಸ್ಥಿತರಿದ್ದರು.
80 ಯೂನಿಟ್ ರಕ್ತ ಸಂಗ್ರಹ
ಶಿಬಿರದಲ್ಲಿ ಸುಮಾರು 80 ಯೂನಿಟ್ ರಕ್ತ ಸಂಗ್ರಹವಾಗಿದೆ. ಶಿಬಿರದಲ್ಲಿ ಮಧುಮೇಹ ಪರೀಕ್ಷೆ ನಡೆಸಲಾಯಿತು.
ಉಮೇಶ್ ಎಸ್. ಪೂಜಾರಿ ಸೂರಾಲುಗುತ್ತು ಪ್ರಾರ್ಥಸಿದರು. ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷ ತಾರಾನಾಥ್ ಕೋಟ್ಯಾನ್ ಸೂರಾಲು ಸ್ವಾಗತಿಸಿ, ಕೋಶಾಧಿಕಾರಿ ಗಣೇಶ್ ಸಾಲಿಯಾನ್ ಜೋಡುಕಟ್ಟೆ ನಿರೂಪಿಸಿದರು. ಕಾರ್ಯದರ್ಶಿ ಮಮತಾ ಅಂಚನ್ ವಂದಿಸಿದರು.