ಕಾರ್ಕಳ : ಉತ್ತರಪ್ರದೇಶದ ಲಖೀಂಪುರಧಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಕೇಂದ್ರ ಸಹಾಯಕ ಗೃಹ ಸಚಿವರ ಬೆಂಗಾವಲು ಪಡೆಯ ಎರಡು ಎಸ್.ಯು.ವಿ ಗಳು ರೈತರ ಮೇಲೆ ಕಾರುಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಲಾಗಿದೆ. ಇನ್ನು ಹಲವು ರೈತ ನಾಯಕರು ಮತ್ತು ಪ್ರತಿಭಟನಾ ನಿರತ ರೈತರನ್ನು ಗಂಭೀರ ಸ್ವರೂಪವಾಗಿ ಗಾಯಗೊಳಿಸಲಾಗಿದೆ. ಹಿಂಸಾ ಕೃತ್ಯಕ್ಕೆ ಕಾರಣರಾದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸಬೇಕು. ಅವರ ಮಗನನ್ನು ಕೂಡಲೇ ಬಂಧಿಸಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅನಿತಾ ಡಿʼಸೋಜಾ ಆಗ್ರಹಿಸಿದರು .
ಉತ್ತರ ಪ್ರದೇಶ ಸರಕಾರ ರೈತರ ಹೋರಾಟದಿಂದ ಭಯಭೀತಗೊಂಡು ಇಂತಹ ಕೃತ್ಯ ಮಾಡುವರನ್ನು ರಕ್ಷಿಸುತ್ತಿದೆ ಎಂಬ ಸಂಶಯ ಮೂಡುತ್ತಿದೆ. ಹಾಗೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕಾರುಹರಿಸಿ ರೈತರ ಸಾವು-ನೋವಿಗೊಳಗಾದವರನ್ನು ಭೇಟಿ ಮಾಡಲು ಹೋದ ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿರುವುದು ಸಂವಿಧಾನ ವಿರೋಧಿ ನಡೆಯಾಗಿದ್ದು ಇದು ಖಂಡನೀಯವೆಂದು ಅನಿತಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.