ಬೆಂಗಳೂರು: ಸರಕಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪೇಸಿಎಂ ಅಭಿಯಾನಕ್ಕೆ ಅನುಮತಿಯಿಲ್ಲದೆ ತನ್ನ ಫೋಟೊ ಬಳಸಿರುವುದಕ್ಕೆ ನಟಿ ಕಾರ್ತಿಕ್ ಅಯ್ಯರ್ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ಸರಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪೇಸಿಎಂ ಅಭಿಯಾನ ನಡೆಸುತ್ತಿದೆ. ಮೊದಲ ದಿನ ಪೇಟಿಎಂ ಮಾದರಿಯಲ್ಲಿ ಪೋಸ್ಟರ್ ಡಿಸೈನ್ ಮಾಡಿ ಅದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೋಟೊ ಹಾಕಿ ರಾತೋರಾತ್ರಿ ಬೆಂಗಳೂರು ನಗರದಲ್ಲಿ ಅಂಟಿಸಿತ್ತು. ಮುಂದಿನ ಹಂತವಾಗಿ ವಿವಿಧ ಪ್ರಮುಖ ವ್ಯಕ್ತಿಗಳ ಫೋಟೊ ಬಳಸಿ ಆನ್ಲೈನ್ನಲ್ಲಿ ಪೋಸ್ಟರ್ ಡಿಸೈನ್ ಮಾಡಿ ಬಿಡುತ್ತಿದೆ. ಈ ಪೈಕಿ ತನ್ನನ್ನು ಕೇಳದೆ ಫೋಟೊ ಬಳಸಿದ್ದಕ್ಕೆ ಕಾರ್ತಿಕ್ ಆರ್ಯ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ನನ್ನ ಫೋಟೊವನ್ನು ಅಕ್ರಮವಾಗಿ ಬಳಸಿರುವುದನ್ನು ನೋಡಿ ಆಘಾತವಾಗಿದೆ. ಕಾಂಗ್ರೆಸ್ ನಡೆಸುತ್ತಿರುವ ಅಭಿಯಾನಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಕಾರ್ತಿಕ್ ಆರ್ಯ ಅವರು , ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.