ವಿಜಯಪುರ: ವಿಜಯಪುರ ಜಿಲ್ಲೆಯ ವಿವಿಧೆಡೆ ಶನಿವಾರ ಬೆಳ್ಳಂಬೆಳಗ್ಗೆ ಭೂಕಂಪನವಾಗಿದೆ. ಬೆಳಗ್ಗೆ 6.22ರಿಂದ 6.23ರ ನಡುವೆ ಸುಮಾರು 10 ಸೆಕೆಂಡ್ ಭೂಮಿ ಅದುರಿದ ಅನುಭವ ಜನರಿಗಾಗಿದೆ. ಭೂಮಿಯೊಳಗಿಂದ ಭಾರಿ ಶಬ್ದವೂ ಕೇಳಿಬಂದಿದೆ ಎಂದು ಜನರು ಹೇಳಿಕೊಂಡಿದ್ದಾರೆ.
ಎರಡು ವರ್ಷಗಳಿಂದ ವಿಜಯಪುರ ಜಿಲ್ಲೆ ಹಾಗೂ ಆಸುಪಾಸಿನಲ್ಲಿ ಲಘು ಭೂಕಂಪಗಳು ಆಗಾಗ ಸಂಭವಿಸುತ್ತಿದ್ದವು. ಆದರೆ ಇಂದು ಸಂಭವಿಸಿದ ಕಂಪನ ಅವುಗಳಿಗಿಂತ ಪ್ರಬಲವಾಗಿತ್ತು. ರಿಕ್ಟರ್ ಸ್ಕೇಲ್ನಲ್ಲಿ 4.6 ದಾಖಲಾಗಿದೆ ಎಂದು ತಿಳಿದುಬಂದಿದೆ.ಭೂಮಿ ಕಂಪಿಸತೊಡಗಿದಾಗ ಜನ ಗಾಬರಿಯಾಗಿ ಮನೆಗಳಿಂದ ಹೊರಗೋಡಿ ಬಂದಿದ್ದಾರೆ.
ಐತಿಹಾಸಿಕ ನಗರವಾಗಿರುವ ವಿಜಯಪುರವೇ ಭೂಕಂಪನ ಕೇಂದ್ರ ಬಿಂದುವಾಗಿತ್ತು. ಭೂಮಿಯ 9.9 ಕಿ.ಮೀ. ಅಳದಲ್ಲಿ ಕಂಪನ ಸಂಭವಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರ, ಪುಣೆ, ಪಂಡಾರಪುರದಲ್ಲೂ ಭೂಕಂಪನದ ಅನುಭವವಾಗಿದೆ.
ಕೊಡಗು ಮತ್ತು ದಕ್ಷಿಣ ಕನ್ನಡದ ಸುಳ್ಯ ಪರಿಸರದಲ್ಲಿ ಕಳೆದ ವಾರ ಪದೇ ಪದೆ ಭೂಕಂಪ ಸಂಭವಿಸಿತ್ತು.