ಶಿರ್ವ, ನ. 24: ಸರಕಾರ ಆನ್ಲೈನ್ ಭೂಪರಿವರ್ತನೆ ಬಗ್ಗೆ ಸೆ.21 ರಂದು ಆದೇಶ ಹೊರಡಿಸಿದ್ದರೂ, ಜಿಲ್ಲಾಡಳಿತ, ತಾಲೂಕು ಕಂದಾಯ ಕಚೇರಿಗಳು ಜನಹಿತದ ಈ ಆದೇಶವನ್ನು ಜಾರಿ ಮಾಡದೆ ಗಂಭೀರ ಕರ್ತವ್ಯಲೋಪ ಎಸಗಿವೆ. ಕೂಡಲೇ ಆದೇಶ ಪಾಲನೆಗೆ ಸೂಚನೆ ನೀಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಬೇಕು ಎಂದು ಬೆಳ್ಳೆ ಗ್ರಾಪಂ ಮಾಜಿ ಸದಸ್ಯರಾದ ಸುಧಾಕರ ಪೂಜಾರಿ, ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಲಾರೆನ್ಸ್ ಅವರು ಆಗ್ರಹಿಸಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಮೂಲಕ ಕಾಪು ವೀರಭದ್ರ ಸಭಾಭವನದಲ್ಲಿ ವಿಧಾನ ಮಂಡಲ ದೂರು ಅರ್ಜಿ ಸಮಿತಿಗೆ ದೂರು ಸಲ್ಲಿಸಲಾಯಿತು.
ಕಂದಾಯ ಇಲಾಖೆಯು ಜನಹಿತದ ದೃಷ್ಟಿಯಿಂದ ಅತ್ಯಂತ ಸರಳ ರೀತಿಯಲ್ಲಿ ಭೂ ಪರಿವರ್ತನೆಗಾಗಿ ಆನ್ಲೈನ್ ತಂತ್ರಾಂಶ ಜಾರಿಗೊಳಿಸಿದ್ದರೂ ಅದನ್ನು ಜಾರಿ ಮಾಡಲಾಗುತ್ತಿಲ್ಲ. ಹಳೆಯ ಮಾದರಿಯಲ್ಲೇ ಕಡತವನ್ನು ಮಂಡಿಸಲು ಸೂಚಿಸಲಾಗುತ್ತಿದೆ. ಇದರಿಂದ ವ್ಯವಸ್ಥೆಯ ಸುಧಾಕರಣೆಯ ಪ್ರತಿಫಲ ಜನಸಾಮಾನ್ಯರಿಗೆ ಸಿಗದೆ ಭೂ ಪರಿವರ್ತನೆ ಕಗ್ಗಂಟಾಗಿಯೇ ಮುಂದುವರಿದಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಪೂರ್ಣ ಹಿಸೆಯ ಭೂ ಪರಿವರ್ತನೆಗೆ 11ಇ ಕಡ್ಡಾಯಗೊಳಿಸಿ ಅರ್ಜಿದಾರರಿಂದ 1200 ರೂ. ಶುಲ್ಕ ಪಡೆದುಕೊಂಡು ಜನರನ್ನು ಸತಾಯಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ದೂರು ನೀಡಲಾಗಿದ್ದರೂ ಯಾವುದೇ ಪ್ರತ್ಯುತ್ತರ ಬಂದಿರುವುದಿಲ್ಲ. ಕ್ಷುಲ್ಲಕ ಕಾರಣಗಳನ್ನು ಉಲ್ಲೇಖಿಸಿ 11ಇ ಕಡ್ಡಾಯಗೊಳಿಸಿದ್ದು, ವಿಎ, ಆರ್ಐ, ತಹಶೀಲ್ದಾರ್, ಡಿಸಿ ಸ್ಥಳ ಪರಿಶೀಲನೆ ಮಾಡುವಾಗ ಮತ್ತೆ ಸರ್ವೆ ವರದಿಯ ಅಗತ್ಯ ಪೂರ್ಣ ಹಿಸೆಗೆ ಇಲ್ಲವಾದರೂ ಅದನ್ನು ಕಡ್ಡಾಯ ಮಾಡಿರುವುದು ಆಕ್ಷೇಪಾರ್ಹ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅರ್ಜಿ ಸಲ್ಲಿಸುವ ಸಂದರ್ಭ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.