ಮೂರು ದಿನಗಳಾದರೂ ಆರದ ಬೆಂಕಿ
ಕಾರ್ಕಳ : ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆರ್ಮುಂಡೆ ಗ್ರಾಮ ಹಾಗೂ ಶಿರ್ಲಾಲು ಗ್ರಾಮ ಪಂಚಾಯತಿ ಗಡಿ ಭಾಗವಾದ ಚಿಂಕರಮಲೆಯ ಅರಣ್ಯ ವ್ಯಾಪ್ತಿಯ ಉಯ್ಯಾಲೆ ಪಾದೆ ಎಂಬಲ್ಲಿ ಕಳೆದ ಮೂರು ದಿನಗಳ ಹಿಂದೆ ಕಾಡ್ಗಿಚ್ಚು ಸಂಭವಿಸಿದ್ದು, ಇನ್ನೂ ಸಂಪೂರ್ಣವಾಗಿ ಬೆಂಕಿ ನಂದಿಲ್ಲ. ಪರಿಣಾಮವಾಗಿ ಸುಮಾರು ಮೂರು ಹೆಕ್ಟೇರ್ ಪ್ರದೇಶದಲ್ಲಿ ಬೆಂಕಿ ಹರಡಿದ್ದು, ಸಸ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ.
ಗುಂಡಮ, ಮಾರ್ಲಿ, ಕುದುರು ಪ್ರದೇಶಗಳಲ್ಲಿ ಬೆಂಕಿ ವ್ಯಾಪಿಸಿದ್ದು ಸುಮಾರು 50 ಜನರ ತಂಡ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಿದ್ದರು. ಅರಣ್ಯಾಧಿಕಾರಿಗಳ ತಂಡ ಕಾಡ್ಗಿಚ್ಚು ಹಬ್ಬಿರುವ ಪ್ರದೇಶಕ್ಕೆ ಭೇಟಿ ನೀಡಿ ಬೆಂಕಿ ಆರಿಸುವಲ್ಲಿ ನಿರತವಾಗಿದೆ. ನಿನ್ನೆ ಬೆಳಗ್ಗೆಯಷ್ಟರಲ್ಲಿ ಹೆಚ್ಚಿನ ಭಾಗದಲ್ಲಿ ಬೆಂಕಿ ಹತೋಟಿಗೆ ಬಂದಿದ್ದು, ಇನ್ನೂ ಸಂಪೂರ್ಣವಾಗಿ ಬೆಂಕಿ ಆರಿಲ್ಲ. ಶಿರ್ಲಾಲು ಪ್ರದೇಶದಲ್ಲಿ ಕಾಡ್ಗಿಚ್ಚು ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಸ್ಥಳೀಯರು ಜೇನು ತೆಗೆಯಲು ಹೋದ ಸಂದರ್ಭ ಜೇನು ಹುಳುಗಳನ್ನು ಓಡಿಸಲು ಹೊಗೆ ಹಾಕಿರಬಹುದು ಇದರಿಂದ ಬೆಂಕಿ ಹತ್ತಿಕೊಂಡಿದೆ ಎಂದು ಗ್ರಾಮಸ್ತರು ಮಾತನಾಡಿಕೊಳ್ಳುತ್ತಿದ್ದಾರೆ.