ತಾಲೂಕು ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ
ಕಾರ್ಕಳ : ವಿಶ್ವಕರ್ಮ ಸಮಾಜ ಸಂಸ್ಕೃತಿ, ಸಂಸ್ಕಾರ ಮತ್ತು ಧಾರ್ಮಿಕ ನೆಲೆಗಟ್ಟಿನೊಂದಿಗೆ ಭದ್ರ ಅಸ್ತಿತ್ವ ಹೊಂದಿದೆ. ಸನಾತನ ಧರ್ಮದಲ್ಲಿ ಅನೇಕ ದೇವ ಸ್ವರೂಪಗಳನ್ನು ಕಾಣುತ್ತೇವೆಯಾದರೂ ಅದರ ಮೂಲ ಶಕ್ತಿ ಒಂದೇ ಆಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಪಿಎಂ ವಿಶ್ವಕರ್ಮ ಯೋಜನೆ ಸಮುದಾಯದ ಕರಕುಶಲ ಕರ್ಮಿಗಳ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಸಹ ಮೊಕ್ತೇಸರ ಸುರೇಶ್ ಆಚಾರ್ಯ ನಿಟ್ಟೆ ಅಭಿಪ್ರಾಯಪಟ್ಟರು. ಶನಿವಾರ ಕಾರ್ಕಳ ತಾಲೂಕು ಕಚೇರಿಯಲ್ಲಿ ನಡೆದ ವಿಶ್ವಕರ್ಮ ಜಯಂತಿ ಆಚರಣೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ವಿಶ್ವಕರ್ಮರು ಎಲ್ಲರೊಂದಿಗೆ ಬೆರೆಯುವವರು
ಧಾರ್ಮಿಕ ಮುಂದಾಳು ಸತೀಶ್ ಆಚಾರ್ಯ ಮಾತನಾಡಿ, ವಿಶ್ವಕರ್ಮರು ಎಂದಿಗೂ ನಿಷ್ಠುರವಾದಿಗಳಲ್ಲ. ಬದಲಾಗಿ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವ ಹಂಬಲ ಹೊಂದಿರುವವರು. ಎಷ್ಟೇ ಬಡತನವಿದ್ದರೂ ತಮ್ಮತನ ಉಳಿಸಿಕೊಂಡು ಜೀವನ ಸಾಗಿಸಿಕೊಂಡು ಬಂದವರು. ಮುಂದಿನ ಪೀಳಿಗೆ ಉನ್ನತ ಮಟ್ಟದ ಹುದ್ದೆಯನ್ನೇರುವ ಮೂಲಕ ಸಮಾಜದ ಮುನ್ನೆಲೆಗೆ ಬರುವಂತಾಗಬೇಕೆಂದು ಹೇಳಿದರು.
ತಹಶೀಲ್ದಾರ್ ಅನಂತಶಂಕರ ಬಿ., ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ತ್ ಎಂ. ಎನ್., ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಜೊತೆ ಮೊಕ್ತೇಸರ ಪಿ. ರವಿ ಆಚಾರ್ಯ, ವಿವಿಧ ಇಲಾಖಾ ಅಧಿಕಾರಿಗಳು, ತಾಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು. ಗ್ರಾಮ ಸಹಾಯಕ ಪ್ರಕಾಶ್ ದೇವಾಡಿಗ ಪ್ರಾರ್ಥಿಸಿದರು. ಮಾಳ ಕೆರ್ವಾಶೆ ಗ್ರಾಮ ಆಡಳಿತಾಧಿಕಾರಿ ರವಿಚಂದ್ರ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.
ʼʼ ಕುಲಕಸುಬಿನ ಮೂಲಕ ಜೀವನ ನಡೆಸಿಕೊಂಡು ಬಂದಿರುವ ವಿಶ್ವಕರ್ಮರು ತಮ್ಮ ಶಿಲ್ಪಕಲೆಗಳ ಮೂಲಕ ನಮಗೆ ದೇವರನ್ನು ತೋರಿಸಿಕೊಟ್ಟವರು. ಕುಲಕಸುಬಿನ ಪರಂಪರೆ ಮುಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ ಜೊತೆಗೆ ವೈಜ್ಞಾನಿಕ ನೆಲೆಗಟ್ಟು ಕಂಡುಕೊಳ್ಳುವಂತಾಗಲಿ.”
– ಅನಂತಶಂಕರ ಬಿ., ಕಾರ್ಕಳ ತಹಶೀಲ್ದಾರ್


