ಸರಣಿ ಟ್ವೀಟ್ನಲ್ಲಿ ಪಠ್ಯದಲ್ಲಿ ನಕಲಿ ಗಾಂಧಿ ಕುಟುಂಬದ ಚರಿತ್ರೆ ಮಾತ್ರ ಇರಬೇಕೆ ಎಂಬ ಪ್ರಶ್ನೆ
ಕಾರ್ಕಳ : ಪಠ್ಯ ಪುಸ್ತಕ ಪರಿಷ್ಕರಿಸುವ ಕುರಿತಾಗಿ ನಡೆಯುತ್ತಿರುವ ಮಾತುಕತೆಗಳ ಹಿನ್ನೆಲೆಯಲ್ಲಿ ಶಾಸಕ, ಮಾಜಿ ಸಚಿವ ವಿ, ಸುನಿಲ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟ್ವಿಟ್ಟರ್ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿ ಕುಟುಕಿದ್ದಾರೆ.
ಅಧಿಕಾರಕ್ಕೆ ಬಂದು ತಿಂಗಳು ಕಳೆಯುವಷ್ಟರಲ್ಲೇ ಸಿದ್ದ ರಾಮಯ್ಯ ಸರಕಾರ ಪಠ್ಯ-ಪುಸ್ತಕ ಪರಿಷ್ಕರಣೆಗೆ ಕೈ ಹಾಕಿದೆ. ಪಠ್ಯದಲ್ಲಿ ಭಾರತೀಯತೆ, ಸಂಸ್ಕೃತಿ ಹಾಗೂ ಇತಿಹಾಸದ ನೈಜ ಸತ್ಯಗಳೇನು ಎಂಬುದು ವಿದ್ಯಾರ್ಥಿಗಳಿಗೆ ತಿಳಿಯದಂತೆ ಮುಚ್ಚಿಡುವುದು ಸರಕಾರದ ಉದ್ದೇಶವೇ ? ಶಾಲೆಗಳಿಗೆ ಪಠ್ಯ- ಪುಸ್ತಕ ಪೂರೈಕೆಯಾದ ನಂತರ ಪರಿಷ್ಕರಣೆಯ ಹಠವೇಕೆ ? ಎಂದು ಸುನಿಲ್ ಕುಮಾರ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಮಾನ್ಯ ಸಿದ್ದರಾಮಯ್ಯನವರೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಇಲಾಖೆಯ ಇತರೆ ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಕ್ಕಾದರೂ ಅವಕಾಶ ಕೊಡಿ. ಅದನ್ನು ಬಿಟ್ಟು ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಕಲಿಸುವ ಪಾಠ ಯಾವುದೆಂದು ನಿರ್ಧರಿಸಿ ಎಂದು ನೀವು ಪಾಠ ಮಾಡಬೇಡಿ. ನಾನು ಮೇಷ್ಟ್ರಾಗಿದ್ದೆ ಕಣ್ರಿ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡುವುದಕ್ಕೆ ಮುನ್ನ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಮಸ್ಯೆ ಮೊದಲು ಅರ್ಥ ಮಾಡಿಕೊಳ್ಳಿ. ಪಠ್ಯ ಪರಿಷ್ಕರಣೆ ಬಗ್ಗೆ ನಿಮಗಿರುವ ಧಾವಂತ ನೋಡಿದರೆ ಶಿಕ್ಷಣ ಇಲಾಖೆಯನ್ನು ಮೂರನೇ ವ್ಯಕ್ತಿಗಳು ನಿಯಂತ್ರಿಸುತ್ತಿರುವ ಅನುಮಾನ ಬರುತ್ತಿದೆ. ಸಿದ್ದರಾಮಯ್ಯನವರೇ ನಿಮಗೆ ಶ್ರೇಷ್ಠ ಭಾರತೀಯ ಚಿಂತನೆಗಳು, ನಿಜವಾದ ಆದರ್ಶ ಪುರುಷ ಯಾರಾಗಬೇಕು ? ತಾಯಿ ಭಾರತೀಯ ಅಮರಪುತ್ರರು ಎಂಬ ವಿಚಾರಗಳು ಹೇಗೆ ಇಷ್ಟವಾಗುತ್ತದೆ ಹೇಳಿ ? ನಿಮ್ಮ ದೃಷ್ಟಿಯಲ್ಲಿ ಶಾಲಾ ಪಠ್ಯದಲ್ಲಿ ನಕಲಿ ಗಾಂಧಿ ಕುಟುಂಬದ ಚರಿತ್ರೆ, ವಿದೇಶಿ ದಾಳಿಯ ವಿಕೃತಿಗಳು ಮಾತ್ರ ತುಂಬಿರಬೇಕಲ್ಲವೇ ? ನಿಮ್ಮನ್ನು ಎರಡನೇ ಬಾರಿಗೆ ಮುಖ್ಯಮಂತ್ರಿ ಮಾಡಿದ್ದಾರೆಂಬ ಋಣ ತೀರಿಸಿಕೊಳ್ಳುವುದಕ್ಕಾಗಿ ಗುಲಾಮಿ ಚಿಂತನೆಯನ್ನು ಶಿಕ್ಷಣದಲ್ಲಿ ತುರುಕುತ್ತೀರಾ ? ಎಂದು ಸುನಿಲ್ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.