ಬೆಂಗಳೂರು: ಕೇವಲ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ವೈದ್ಯರೊಬ್ಬರು ೧೧ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಮುಂಜಾನೆ ಬೆಂಗಳೂರಿನಲ್ಲಿ ಸಂಭವಿಸಿದೆ. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಪೃಥ್ವಿಕಾಂತ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವರು. ತಾನು ವಾಸವಾಗಿದ್ದ ಅಪಾರ್ಟ್ಮೆಂಟ್ನ 11ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಆಂಧ್ರಪ್ರದೇಶದ ಪೃಥ್ವಿಕಾಂತ್ ರೆಡ್ಡಿ ಮೂರು ತಿಂಗಳ ಹಿಂದೆಯಷ್ಟೇ ವೈದ್ಯೆಯನ್ನು ವಿವಾಹವಾಗಿದ್ದರು. ಅಮೃತಹಳ್ಳಿ ಮುಖ್ಯರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನ 11ನೇ ಮಹಡಿಯ ಕಟ್ಟಡದಲ್ಲಿ ದಂಪತಿ ವಾಸಿಸುತ್ತಿದ್ದರು. ಮುಂಜಾನೆ 5 ಗಂಟೆ ಸುಮಾರಿಗೆ ಮನೆಯ ಬಾಲ್ಕನಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ, ಪತ್ನಿ ಅನ್ಯೋನ್ಯವಾಗಿಯೇ ಇದ್ದರು. ದಾಂಪತ್ಯ ಸಮಸ್ಯೆ ಇರಲಿಲ್ಲ. ಆದರೆ ಕಳೆದ ಒಂದು ವಾರದಿಂದ ಪೃಥ್ವಿಕಾಂತ್ ರೆಡ್ಡಿ ಖಿನ್ನರಾಗಿದ್ದರು. ಪತ್ನಿ ಮಲಗಿದ್ದ ಸಂದರ್ಭವನ್ನು ನೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೊಬೈಲ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ತನಗೆ ಮದುವೆಗೆ ಮುಂಚೆಯೇ ಹೃದಯ ಸಂಬಂಧಿ ಕಾಯಿಲೆ ಇತ್ತು. ಆದರೆ ಈ ವಿಚಾರವನ್ನು ಮದುವೆಗೆ ಮುಂಚೆ ತನ್ನ ಪತ್ನಿಗೆ ತಿಳಿಸಿರಲಿಲ್ಲ. ಹೃದ್ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿರುವಾಗ ತಾನು ಬದುಕುವುದು ಮತ್ತು ಎಲ್ಲರಿಗೂ ಹೊರೆಯಾಗುವುದರಲ್ಲಿ ಅರ್ಥವಿಲ್ಲ ಎಂದು ಬರೆದಿಟ್ಟಿದ್ದಾರೆ. ಯಾವುದೇ ಕೈಬರಹದ ಡೆತ್ ನೋಟ್ ಸಿಕ್ಕಿಲ್ಲ, ಬದಲಿಗೆ ಆತ ಫೋನ್ನಿಂದ ಕಳುಹಿಸಲಾದ ವಾಟ್ಸಾಪ್ ಸಂದೇಶವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಾ.ರೆಡ್ಡಿ ಐದು ದಿನಗಳಿಂದ ಆಸ್ಪತ್ರೆಗೆ ಹೋಗಿರಲಿಲ್ಲ ಎನ್ನಲಾಗಿದೆ. ಅವರು ನರವಿಜ್ಞಾನ ವಿಭಾಗದಲ್ಲಿ ಡಾಕ್ಟರೇಟ್ ಆಫ್ ಮೆಡಿಸಿನ್ ಓದುತ್ತಿದ್ದರು. ರೆಡ್ಡಿ ಉತ್ತಮ ವಿದ್ಯಾರ್ಥಿಯಾಗಿದ್ದರು ಮತ್ತು ಅವರ ಸ್ನೇಹಿತರು ಸೇರಿದಂತೆ ಯಾರಿಗೂ ಅವರ ಆರೋಗ್ಯದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಅವರು ತಮ್ಮ ಅನಾರೋಗ್ಯದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಅವರ ಸಾವು ದುರದೃಷ್ಟಕರ ಎಂದು
ಬಿಎಂಆರ್ಸಿಐ ನಿರ್ದೇಶಕ ಕಮ್ ಡೀನ್ ಡಾ. ರವಿ ಕೆ. ತಿಳಿಸಿದ್ದಾರೆ.