ಬೆಂಗಳೂರು: ಕರಾವಳಿ ಜಿಲ್ಲೆಗಳ ಗ್ರಾಮೀಣ ಕ್ರೀಡೆ ಎಂದೇ ಪ್ರಸಿದ್ಧಿ ಪಡೆದಿರುವ ಕಂಬಳಕ್ಕೆ ಒತ್ತು ನೀಡುವಂತೆ ಕರಾವಳಿ ಭಾಗದ ಶಾಸಕರು ಮೇಲ್ಮನೆಯ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ನಿಯಮ 330 ರ ಅಡಿಯಲ್ಲಿ ಕಾಂಗ್ರೆಸ್ನ ಮಂಜುನಾಥ್ ಭಂಡಾರಿ ಅವರು ಪ್ರಸ್ತಾವಿಸಿ, ಕಂಬಳಕ್ಕೆ ತನ್ನದೇ ಆದ ಐಹಿತ್ಯವಿದೆ. ಕೃಷಿ ಸಂಸ್ಕೃತಿಯ ಅವಿಭಾಜ್ಯ ಅಂಗವೆನಿಸಿರುವ ಕಂಬಳದ ಕೋಣಗಳನ್ನು ಪೋಷಿಸುವುದೇ ಪ್ರತಿಷ್ಠೆ ಎಂದು ಹೇಳಿದರು.
ಧರ್ಮಾತೀತವಾಗಿ ನಡೆಯುತ್ತಿರುವ ಕ್ರೀಡೆ ಕಂಬಳ. ಕರಾವಳಿ ಭಾಗದಲ್ಲಿ 200 ಸಾಂಪ್ರದಾಯಿಕ ಮತ್ತು 20 ಆಧುನಿಕ ಕಂಬಳಗಳು ವರ್ಷದಲ್ಲಿ ನಡೆಯುತ್ತವೆ. ಕೋಣಗಳ ಪೋಷಣೆಯಿಂದ ತೊಡಗಿ, ಕಂಬಳ ನಡೆಯುವ ವರೆಗೆ ಲಕ್ಷಾಂತರ ರೂಪಾಯಿ ಖರ್ಚು ವೆಚ್ಚ ಇದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ನೆರವಿಗೆ ಧಾವಿಸುವಂತೆ ಅವರು ಸರ್ಕಾರವನ್ನು ಆಗ್ರಹಿಸಿದರು.
ಕಂಬಳ ಆಯೋಜಿಸಲು ಸರ್ಕಾರ ಧನ ಸಹಾಯ ನೀಡಬೇಕು. ಕಂಬಳ ಓಟಗಾರರಿಗೆ ತರಬೇತಿ, ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ವಾರ್ಷಿಕವಾಗಿ ಕನಿಷ್ಠ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕು. ಕರಾವಳಿಯ ಎರಡು ಜಿಲ್ಲೆಗಳಿಗೆ ಕಂಬಳ ಆಯೋಜಕರ ಸಮಿತಿ ರಚಿಸಬೇಕು. ಮೂಡುಬಿದರೆಯಲ್ಲಿ ಕಂಬಳ ಮ್ಯೂಸಿಯಂ ಸ್ಥಾಪನೆಗೆ 2 ಕೋ.ರೂ. ಮೀಸಲಿಡಬೇಕು. ಓಟಗಾರರಿಗೆ ವಿಮೆ, ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ವೀಕ್ಷಕರಿಗೆ ಮೂಲಸೌಕರ್ಯ ಹಾಗೂ ಕಂಬಳ ತಾಣಗಳಿಗೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.