ಕಾರ್ಕಳ: ಕಾನೂನು ರೀತ್ಯಾಕ್ಕೆ ವಿರುದ್ಧವಾಗಿ ತಾಲೂಕು ವ್ಯಾಪ್ತಿಯಲ್ಲಿ ತಲೆಎತ್ತಿರುವ ಅನಧಿಕೃತ ತಳ್ಳುಗಾಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಾರ್ಕಳ ತಾಲೂಕು ಹೋಟೆಲ್ ಮಾಲಿಕರ ಸಂಘವು ಒತ್ತಾಯಿಸಿದೆ.
ನಗರದ ಹೋಟೆಲ್ ಪ್ರಕಾಶ್ ಸಭಾಂಗಣದಲ್ಲಿ ಜು. 21ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖ ಹರೀಶ್ ನಾಯಕ್ ಮಾತನಾಡಿ, ಹೊಟೇಲ್, ರೆಸ್ಟೋರೆಂಟ್ ಉದ್ಯಮ ಸ್ಥಾಪನೆಗೆ ಸಾಲ ಮೂಲಕ ಲಕ್ಷಾಂತರ ರೂ. ಬಂಡವಾಳ ಹೂಡಿ, ವಿವಿಧ ಇಲಾಖೆಗಳ ಮಾನ್ಯತೆ ಪತ್ರ ಪಡೆದು, ಸ್ಥಳೀಯಾಡಳಿತದಿಂದ ಪರವಾನಿಗೆ ಪಡೆದು ಕಾರ್ಮಿಕರ ಹಿತಕಾಪಾಡಿಕೊಂಡು ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ.
ಅನಧಿಕೃತ ತಳ್ಳುಗಾಡಿ ವ್ಯಾಪಾರಕ್ಕೆ ಯಾವುದೇ ಮಾನದಂಡವಿಲ್ಲದೇ, ಶುಚಿತ್ವ ಪರಿಪಾಲಿಸಲು ಒತ್ತು ನೀಡಿದೇ ವ್ಯಾಪಾರಕ್ಕೆ ಅನುಮತಿ ನೀಡಲಾಗುತ್ತಿದೆ. ಇದರಿಂದ ತಿಂಡಿ ತಿನಸುಗಳ ದರ ಪಟ್ಟಿದಲ್ಲಿ ವ್ಯತ್ಯಯ ಕಂಡು ಬರುತ್ತಿದೆ. ಹೋಟೆಲ್, ರೆಸ್ಟೋರೆಂಟ್ ಉದ್ಯಮಕ್ಕೆ ಮಾರಕವಾಗಿ ಕೊಡಲಿಯೇಟು ಬೀಳುವಂತಾಗಿದೆ.
ಹೋಟೆಲ್, ರೆಸ್ಟೋರೆಂಟ್ ಉದ್ಯಮ ಪ್ರಾರಂಭದ ಘಟ್ಟದಲ್ಲಿ ಸ್ವಚ್ಚತೆಯ ನೆಪದಲ್ಲಿ ತ್ಯಾಜ್ಯ ನೀರು ಹರಿದು ಹೋಗಲೆಂದು ಒಂಚರಂಡಿ ಸಂಪರ್ಕಕ್ಕೆಂದು ಸ್ಥಳೀಯಾಡಳಿತವು ತೆರಿಗೆ ವಸೂಲಿ ನಡೆಸುತ್ತಿದ್ದರೂ, ನಗರದಲ್ಲಿ ಅದರ ಸವಲತ್ತು ಒದಗಿಸುವಲ್ಲಿ ಸ್ಥಳೀಯಾಡಳಿತ ವಿಫಲಗೊಂಡಿದೆ. ಕೂಡಲೇ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಸ್ವಚ್ಚತೆಗೆ ಒತ್ತು ನೀಡಬೇಕೆಂದು ಇದೇ ಸಂದರ್ಭದಲ್ಲಿ ಅವರು ಆಗ್ರಹಿಸಿದರು.
ತಳ್ಳುಗಾಡಿಯ ಮೂಲಕ ಸಿದ್ಧ ಆಹಾರಗಳ ಮಾರಾಟ ಮಾಡುವವರನ್ನು ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಬೇಕು. ಅಲ್ಲಿ ಸ್ವಚ್ಛ ಕುಡಿಯುವ ನೀರು, ಶೌಚಾಲಯ ,ಆಸನದ ವ್ಯವಸ್ಥೆ, ಪಾರ್ಕ್ ಕಲ್ಪಿಸಿಕೊಡಬೇಕು ಎಂದರು. ವೇದಿಕೆಯಲ್ಲಿ ಪ್ರಕಾಶ್ ಶೆಟ್ಟಿ, ಉದಯ ಲೂಯಿಸ್, ವಿಶ್ವನಾಥ ಕಾಮತ್, ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.