ಬೆಂಗಳೂರು : ಪ್ರತಿ ಮಳೆಗಾಲದಲ್ಲಿಯೂ ಗುಡ್ಡ ಜರಿಯುವುದು, ವಾಹನಗಳು ಬ್ಲಾಕ್ ಆಗುವಂತಹ ಸಮಸ್ಯೆಗಳು ಚಾರ್ಮಾಡಿ ಘಾಟ್ ರಸ್ತೆಗಳಲ್ಲಿ ಆಗುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಹೇರಿದೆ.
ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದ್ದು, ವಾಹನ ನಿಲ್ಲಿಸಿದರೆ ಪೊಲೀಸರು ಕೇಸು ದಾಖಲಿಸಿಕೊಳ್ಳಲಿದ್ದಾರೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಪ್ರಯಾಣಿಕರಿಗೆ ಈ ಬಗ್ಗೆ ಸೂಚನೆ ನೀಡುತ್ತಿದ್ದಾರೆ.
ಸೂಚನೆ ನಾಮಫಲಕ ಹಾಕಿರುವ ಜಿಲ್ಲಾಡಳಿತ ಮಳೆಯ ನಡುವೆ ವಾಹನ ನಿಲ್ಲಿಸಿ ಆಪಾಯಕಾರಿ ಸ್ಥಳಗಳಲ್ಲಿ ಜನರ ಓಡಾಟವನ್ನು ಸಂಪೂರ್ಣ ನಿಷೇಧಿಸಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ ವಿಭಾಗದಲ್ಲಿರುವ ಚಾರ್ಮಾಡಿ ಘಾಟ್ನಲ್ಲಿ ಮಳೆಗಾಲದಲ್ಲಿ ಪ್ರತಿವರ್ಷ ಅವಘಡಗಳು ಸಂಭವಿಸುತ್ತವೆ.

ಬೆಟ್ಟಗಳ ಮಧ್ಯೆ ರಸ್ತೆ ಹಾದು ಹೋಗುವುದರಿಂದ ರಸ್ತೆಯ ಬದಿಯಲ್ಲಿ ದೊಡ್ಡ ಜಲಪಾತಗಳನ್ನು ಇಲ್ಲಿ ಕಾಣಬಹುದಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಬಹಳಷ್ಟು ಜನ ಇದನ್ನು ನೋಡಲೆಂದೇ ಪ್ರಯಾಣಿಸುತ್ತಾರೆ. ರಸ್ತೆ ಮಧ್ಯೆ ಇಳಿದು ವಿಡಿಯೋ, ಪೋಟೋ ತೆಗೆಯುವುದನ್ನು ಮಾಡುತ್ತಾರೆ.ಈ ಕಾರಣಕ್ಕೆ ಆಗಾಗ ರಸ್ತೆ ಜಾಮ್ ಆಗುವುದೂ ಇದೆ.

































