6 ವರ್ಷಗಳಲ್ಲಿ 400 ಕೋ.ರೂ. ಗೂ ಆಧಿಕ ಮೊತ್ತ ಹಗಲು ದರೋಡೆ ಎಂಬ ಆರೋಪ
ಮಂಗಳೂರು: ಸುರತ್ಕಲ್ನ ಎನ್ಐಟಿಕೆಯಲ್ಲಿರುವ ಟೋಲ್ಗೇಟ್ ಅನ್ನು ತೆರವುಗೊಳಿಸಲು ಆಗ್ರಹಿಸಿ ಟೋಲ್ಗೇಟ್ಗೆ ಮುತ್ತಿಗೆ ಹಾಕುವ ಪ್ರಯತ್ನ ಇಂದು ನಡೆಯಿತು. ಆದರೆ ಪೊಲೀಸರು ಹೋರಾಟಗಾರರನ್ನು ವಶಕ್ಕೆ ತೆಗೆದುಕೊಂಡು ದೂರ ಕರೆದುಕೊಂಡು ಹೋಗಿದ್ದಾರೆ.
ಈ ಟೋಲ್ಗೇಟ್ ಅನಧಿಕೃತವಾಗಿದ್ದು, ಸರಕಾರ ಹಲವು ಬಾರಿ ನೀಡಿರುವ ಗಡುವು ಮುಗಿದಿದೆ. ಹೀಗಾಗಿ ನಾವೇ ತೆರವುಗೊಳಿಸುತ್ತೇವೆ ಎಂದು ಹೇಳಿ ಹೋರಾಟಗಾರರು ಮುತ್ತಿಗೆ ಹಾಕಲು ಮುಂದಾಗಿದ್ದರು.
ಮಂಗಳವಾರ ಬೆಳಗ್ಗೆ ಟೋಲ್ಗೇಟ್ಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಯಿತು. ಮುನ್ನೆಚ್ಚರಿಕೆಯಾಗಿ ನಿನ್ನೆ ಸಂಜೆಯಿಂದಲೇ ಟೋಲ್ಗೇಟ್ ಸುತ್ತಮುತ್ತ 500ಕ್ಕೂ ಅಧಿಕ ಪೊಲೀಸರ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ತಾತ್ಕಾಲಿಕ ನೆಲೆಯಲ್ಲಿ ಆರಂಭಿಸಲಾದ ಟೋಲ್ಗೇಟನ್ನು ಹೆಜಮಾಡಿ ಟೋಲ್ಗೇಟ್ ಪ್ರಾರಂಭವಾದ ಬಳಿಕ ಮುಚ್ಚಬೇಕಿತ್ತು. ಆದರೆ 6 ವರ್ಷಗಳಲ್ಲಿ 400 ಕೋಟಿ ರೂ.ಗೂ ಅಧಿಕ ಹಗಲು ದರೋಡೆಯಾಗಿದ್ದರೂ ಟೋಲ್ಗೇಟ್ ಮುಚ್ಚಲು ಸರಕಾರ ಸಿದ್ಧವಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಉಡುಪಿ, ಕಾರ್ಕಳ ಮುಂತಾದೆಡೆಗಳಿಂದ ಹೋರಾಟಗಾರರು ಬಂದಿದ್ದರು.