ಬೆಂಗಳೂರು, ಆ. 8 : ಅಯೋಧ್ಯೆಯಲ್ಲಿ ರಾಮ ಮ<ದಿರ ನಿರ್ಮಾಣವಾಗುವಾಗಲೇ ಅಲ್ಲಿಗೆ ಭೇಟಿ ನೀಡುವ ಕರ್ನಾಟಕದ ಭಕ್ತರ ಅನುಕೂಲಕ್ಕಾಗಿಮ ಯಾತ್ರಿ ನಿವಾಸವನ್ನು ನಿರ್ಮಿಸುವ ಉದ್ದೇಶ ಕರ್ನಾಟಕ ಸರಕಾರಕ್ಕಿದೆ.
ಕರ್ನಾಟಕ ಯಾತ್ರಿ ನಿವಾಸ ನಿರ್ಮಿಸಲು ಎರಡು ಎಕ್ಕರೆ ನಿವೇಶನ ಒದಗಿಸುವಂತೆ ವಿನಂತಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ರಾಮ ಮಂದಿರ ಸಮೀಪ ಕರ್ನಾಟಕದ ಯಾತ್ರಿಕರ ಭವನ ನಿರ್ಮಾಣಕ್ಕೆ 2 ಎಕರೆಗಳಷ್ಟು ಸ್ಥಳವನ್ನು ನೀಡಬೇಕು ಎಂದು ಯೋಗಿ ಆದಿತ್ಯನಾಥ್ ಅವರಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದಿಂದ ಅಯೋಧ್ಯೆಗೆ ಸಾವಿರಾರು ಭಕ್ತರು ಶ್ರೀ ರಾಮನ ದರ್ಶನ ಪಡೆಯಲು ತೆರಳುವ ಸಂದರ್ಭದಲ್ಲಿ ಅವರಿಗೆ ಉಳಿದುಕೊಳ್ಳಲು ಪೂರಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಉತ್ತರ ಪ್ರದೇಶದ ಸರ್ಕಾರದ ಮುಂದೆ ತಮ್ಮ ಮನದಿಂಗಿತವನ್ನು ಪತ್ರದ ಮುಖೇನ ತಿಳಿಸಿದ್ದಾರೆ.
ರಾಮ ಮತ್ತು ಕರ್ನಾಟಕಕ್ಕೆ ಸಂಬಂಧವಿದ್ದು, ರಾಮನ ಪ್ರಿಯ ಭಕ್ತ ಹನುಮ ಜನಿಸಿದ ಅಂಜನಾದ್ರಿ ಪರ್ವತ ರಾಜ್ಯದ ಹಂಪಿಯ ಸಮೀಪದಲ್ಲಿದೆ. ಈ ಹಿನ್ನೆಲೆಯಲ್ಲಿಯೂ ರಾಜ್ಯದ ಹೆಚ್ಚಿನ ಭಕ್ತರು ಅಯೋಧ್ಯೆಯನ್ನು ಸಂದರ್ಶಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಲ್ಲಿ ಪೂರಕ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ಯೋಗಿ ಸರ್ಕಾರಕ್ಕೆ ಈ ಮನವಿಯನ್ನು ಸಲ್ಲಿಸಿದ್ದಾರೆ.