ಮಡಿಕೇರಿ : 1 ಕೋಟಿ ರೂ. ನೀಡದೇ ಇದ್ದಲ್ಲಿ ಎಸಿಬಿ ದಾಳಿ ನಡೆಯುತ್ತದೆ ಎಂದು ಬೆದರಿಕೆ ಕರೆ ಬಂದಿರುವ ಕುರಿತು ಶಾಸಕ ಕೆ.ಜಿ ಬೋಪಯ್ಯ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಮಡಿಕೇರಿ ಟೌನ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಜ. 5 ರ ಸಂಜೆ ಕೆ.ಜಿ ಬೋಪಯ್ಯಗೆ ಕರೆ ಮಾಡಿದ್ದ ವ್ಯಕ್ತಿ ಈ ಬೇಡಿಕೆ ಇಟ್ಟಿದ್ದು ತಾನು ಎಸಿಬಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಗುರುವಾರದಂದು ಬೋಪಯ್ಯ ನಿವಾಸದ ಮೇಲೆ ಎಸಿಬಿ ದಾಳಿ ನಡೆಸುವ ಯೋಜನೆ ಇದೆ ಎಂದು ತಿಳಿಸಿದ್ದಾನೆ. ಸೌಹಾರ್ದಯುತವಾಗಿ ವಿಷಯ ಬಗೆಹರಿಸಿಕೊಂಡರೆ ಎಸಿಬಿ ದಾಳಿ ತಡೆಯುತ್ತೇನೆ. ಆದರೆ, ನೀವು ಇದಕ್ಕಾಗಿ ನನಗೆ 1 ಕೋಟಿ ರೂ. ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾನೆ. ಬೋಪಯ್ಯ ಅವರು ಎಸಿಬಿ ದಾಳಿ ಮುಂದುವರೆಸಿ ಎಂದು ಹೇಳಿ ಕರೆ ಕಟ್ ಮಾಡಿರುತ್ತಾರೆ. ಪ್ರಾಥಮಿಕ ವರದಿ ಪ್ರಕಾರ ಕರೆ ಆಂಧ್ರಪ್ರದೇಶದಿಂದ ಬಂದಿದೆ ಎನ್ನಲಾಗುತ್ತಿದೆ.