ಬೆಂಗಳೂರು, ಜು. 28 : ರಾಜ್ಯದಲ್ಲಿ ಕೊರೊನಾ ತಾಂಡವ ನಿಯಂತ್ರಣಕ್ಕೆ ಸಿಗದೆ ಹೆಚ್ಚುತ್ತಿರುವ ಹೊರತಾಗಿಯೂ ಮುಖಂಡರ ರಾಜಕೀಯ ಆಟ ಮುಂದುವರಿದಿದೆ. ಇಡೀ ರಾಜ್ಯ ಕೊರೊನಾ ಹಾವಳಿಯಿಂದ ಚಿಂತಿತವಾಗಿದ್ದರೆ ಸರಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ. ವಿಧಾನ ಪರಿಷತ್ ಗೆ ನೂತನವಾಗಿ ಅಯ್ಕೆಯಾಗಿರುವ ಸದಸ್ಯರು ಸಚಿವ ಸ್ಥಾನಕ್ಕಾಗಿ ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಶೀಘ್ರವೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ವಿಸ್ತರಣೆಯಾದರೆ ಯಾರೆಲ್ಲ ಸಚಿವರಾಗಬಹುದು ಎಂಬ ಲೆಕ್ಕಾಚಾರಗಳು ಈಗಲೇ ಶುರುವಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಕೆಲ ಶಾಸಕರಿಗೆ ಈಗಾಗಲೇ ಮಂತ್ರಿಗಿರಿ ನೀಡಲಾಗಿದೆ. ಇನ್ನುಳಿದಂತೆ ಕೆಲವರಿಗೆ ನೀಡುವುದು ಬಾಕಿ ಇದೆ. ಮೊದಲ ಹಂತದಲ್ಲಿ ಸಚಿವ ಸ್ಥಾನ ನೀಡಲಾಗದವರ ಪೈಕಿ ಕೆಲವರನ್ನು ಇತ್ತೀಚೆಗೆ ಮೇಲ್ಮನೆಗೆ ಕಳುಹಿಸಲಾಗಿದೆ.ಅವರಿಂದ ಸಚಿವ ಸ್ಥಾನಕ್ಕಾಗಿ ಭಾರಿ ಒತ್ತಡವಿದೆ. ಇದೇ ವೇಳೆ ಸಚಿವ ಸ್ಥಾನಕ್ಕಾಗಿ ದೊಡ್ಡ ಮಟ್ಟದಲ್ಲಿ ಲಾಬಿಯೂ ಪ್ರಾರಂಭವಾಗಿರುವ ಕುರಿತು ಅಧಿಕಾರ ಕೇಂದ್ರದ ಪಡಸಾಲೆಯಲ್ಲಿ ಗುಸುಗುಸು ಕೇಳಿ ಬರುತ್ತಿದೆ.