ಕಾರ್ಕಳ : ದೈವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಗಳಿಗೆ ಬಳಸುವ ಪವಿತ್ರ ಕಡ್ಸಲೆಯನ್ನು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿಯವರು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಉಡುಗೊರೆಯಾಗಿ ನೀಡುವ ಮೂಲಕ ತುಳುನಾಡಿನ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ. ದೈವಸ್ಥಾನದಲ್ಲಿ ಇರಬೇಕಾದ ಕಡ್ಸಲೆಯನ್ನು ರಾಜಕೀಯ ವೇದಿಕೆಯಲ್ಲಿ ಉಡುಗೊರೆಯಾಗಿ ನೀಡಿರುವುದು ದೈವರಾಧನೆ ಹಾಗೂ ಸಮಸ್ತ ತುಳುನಾಡಿನ ಜನತೆಗೆ ಎಸಗಿದ ಅವಮಾನ. ಹಿಂದೂ ಧಾರ್ಮಿಕ ಪದ್ಧತಿಗೆ ಅಪಮಾನಿಸುವ ಇಂತಹ ವರ್ತನೆ ಖಂಡನೀಯ. ಹೀಗಾಗಿ ಕಾಂಗ್ರೆಸ್ನವರು ಕೂಡಲೇ ಜನತೆಯ ಕ್ಷಮೆ ಯಾಚಿಸಬೇಕೆಂದು ಸರಕಾರದ ಮುಖ್ಯ ಸಚೇತಕ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆಗ್ರಹ ವ್ಯಕ್ತಪಡಿಸಿದ್ದಾರೆ.
ಜು. 6ರಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಉಡುಪಿಗೆ ಭೇಟಿ ನೀಡಿದ ಸಂದರ್ಭ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಜುನಾಥ ಪೂಜಾರಿ ಅವರು ಪ್ಲಾಸ್ಟಿಕ್ ಕವರ್ನಲ್ಲಿ ಕಡ್ಸಲೆಯನ್ನು ಉಡುಗೊರೆಯಾಗಿ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶವೂ ವ್ಯಕ್ತವಾಗುತ್ತಿದೆ.