Home Blog

ಅಪರಾಧ : ಜಾಗದ ತಕರಾರು : ಮಾನಹಾನಿ ದೂರು ದಾಖಲು

ಕಾರ್ಕಳ : ಕಲ್ಯಾ ಗ್ರಾಮದ ಜಾಗದ ತಕರಾರಿನ ಬಗ್ಗೆ ಕಡಂಬೂರಿ ನಿವಾಸಿ ಸಹನಾ ಹಾಗೂ ಇವರ ಅಜ್ಜಿ ವಾರಿಜಾ ಮತ್ತು ಹರಿಣಿ, ಕುಸುಮ ಎಂಬುವವರ ಮಧ್ಯೆ ಕಾರ್ಕಳ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದ್ದು, ತಕರಾರು ಇರುವ ಜಾಗದ ಸರ್ವೆ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ, ಮಾ. 21ರಂದು ಬೆಳಿಗ್ಗೆ 10 ಗಂಟೆಗೆ ಸಹನಾರವರು ತಮ್ಮ ತಾಯಿ, ಸೀತಾ, ಸುಜಾತ, ಸುಪ್ರೀತ, ಸುನೀತಾ ಹಾಗೂ ಸಬಿತಾ ಇವರ ಜೊತೆಯಲ್ಲಿ ತೆರಳಿ, ಜಾಗದ ಸರ್ವೆ ನಡೆಸುತ್ತಿದ್ದ ಸರ್ವೆಯರಲ್ಲಿ ಜಾಗದ ಸರ್ವೆ ನಡೆಸಲು ಇರುವ ಆದೇಶದ ಪ್ರತಿಯ ಬಗ್ಗೆ ವಿಚಾರಿಸಿದಾಗ, ಜಾಗದ ಸರ್ವೆ ನಡೆಸಲು ಆಕ್ಷೇಪ ಇರುವುದಾಗಿ ತಿಳಿಸಿದ್ದಾರೆ. ಸ್ಥಳದಲ್ಲಿದ್ದವರ ಪೈಕಿ ಪ್ರಕಾಶ ಮತ್ತು ಯತೀಶ್ ಇವರು ಅವಾಚ್ಯ ಶಬ್ದಗಳಿಂದ ಬೈಯ್ದು ಮಾನಕ್ಕೆ ಕುಂದನ್ನುಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷದಿಂದ ಹಲ್ಲೆ : ವ್ಯಕ್ತಿಗೆ ಗಾಯ

ಕಾರ್ಕಳ : ಕುಕ್ಕುಂದೂರು ಗ್ರಾಮದ ನಕ್ರೆ ಪೊಸನೊಟ್ಟು ನಿವಾಸಿ ಶೇಖರ ನಾಯ್ಕ್ ಎಂಬವರು ತನ್ನ ಮನೆಯ ನೆರೆಮನೆಯ ನಿವಾಸಿ ಶ್ರೀನಿವಾಸ ಆಚಾರ್ಯ ಎಂಬುವವರ ಜೊತೆ ದಿನಾಲು ಮಾತನಾಡುತ್ತಿದ್ದು, ಮಾ.20ರಂದು ಅಂಗಳದಲ್ಲಿ ನಿಂತುಕೊಂಡು ಮಾತನಾಡುತ್ತಿದ್ದಾಗ ಶ್ರೀನಿವಾಸ ಆಚಾರ್ಯರ ಹೆಂಡತಿಯ ತಮ್ಮ ಜಗದೀಶ ಆಚಾರ್ಯ ಏಕಾಏಕಿ ಕೈಯಲ್ಲಿ ತುಂಡು ಕತ್ತಿಯನ್ನು ಹಿಡಿದುಕೊಂಡು ಬಂದು, ಅವಾಚ್ಯ ಶಬ್ದಗಳಿಂದ ಬೈದು ಶೇಖರ ನಾಯ್ಕ ಅವರ ಎಡಕೈಯ ಮೊಣಗಂಟಿನ ಕೆಳಗೆ ಕಡಿದು ಕತ್ತಿಯನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾನೆ. ಗಾಯಗೊಂಡ ಶೇಖರ ನಾಯ್ಕ್ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಹಲ್ಲೆಗೆ ಇವರಿಬ್ಬರೂ ಅಪಾದಿತ ಜಗದೀಶನ ವಿಚಾರ ಮಾತನಾಡುತ್ತಿದ್ದಾರೆ ಎಂಬ ದ್ವೇಷ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ

ಅತ್ತೂರು ಚರ್ಚ್‌ ಬಳಿ ಇರುವ ಮೇಣದ ಬತ್ತಿ ತಯಾರಿ ಫ್ಯಾಕ್ಟರಿಗೆ ಬೆಂಕಿ : ಅಪಾರ ಹಾನಿ

ಕಾರ್ಕಳ : ಅತ್ತೂರು ಚರ್ಚ್ ಬಳಿ ಇರುವ ಮೇಣದ ಬತ್ತಿ ತಯಾರಿಸುವ ಫ್ಯಾಕ್ಟರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಮಾ. 22ರ ಮಧ್ಯಾಹ್ನ ಸಂಭವಿಸಿದೆ. ಮೇಣ ತಯಾರಿಸುವ 3 ಮಷಿನ್ ಹಾಗೂ ಜನವರಿಯಿಂದ ದಾಸ್ತಾನು ಮಾಡಲಾಗಿದ್ದ ಮೇಣದ ಬತ್ತಿ ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಮಾಹಿತಿ ದೊರೆತ ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ 3 ಗಂಟೆಗಳ ಕಾಲ ಸತತ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಅತ್ತೂರು ಪರಿಸರದಲ್ಲಿನ ಪರ್ಪಲೆಗಿರಿಯ ಬೆಟ್ಟದಲ್ಲಿ ಕಳೆದ 15 ದಿನಗಳ ಹಿಂದೆ ವಾರದಲ್ಲಿ ಎರಡು ಬಾರಿಯಂತೆ ಬೆಂಕಿ ಅವಘಡ ಸಂಭವಿಸುತ್ತಿದ್ದು, ಬೆಂಕಿಯ ಕೆನ್ನಾಲಗೆ ಸುತ್ತಲಿನ ಪರಿಸರವನ್ನು ಸುಟ್ಟು ಕರಕಲಾಗುವಂತೆ ಮಾಡಿದೆ. ಇದೀಗ ಅದೇ ಪರಿಸರದಲ್ಲಿರುವ ಮೇಣದ ಬತ್ತಿ ಫ್ಯಾಕ್ಟರಿಗೆ ಬೆಂಕಿ ಹತ್ತಿಕೊಂಡಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್ ಮತ್ತು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ಕಾಂಚೀಪುರಂನಲ್ಲಿರುವ ಪಟಾಕಿ ಗೋದಾಮಿನಲ್ಲಿ ಸ್ಫೋಟ; 13 ಮಂದಿ ಗಾಯಗೊಂಡಿದ್ದು, ಇಬ್ಬರು ಮಹಿಳೆ ಸೇರಿದಂತೆ ಏಳು ಜನರ ಸಾವು

ತಮಿಳುನಾಡು : ಕಾಂಚೀಪುರಂ ಜಿಲ್ಲೆಯ ಕುರುವಿಮಲೈ ಎಂಬಲ್ಲಿ ಬುಧವಾರ ಮಧ್ಯಾಹ್ನ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿ ಸಾವಿಗೀಡಾಗಿದ್ದು 13 ಮಂದಿ ಗಾಯಗೊಂಡಿದ್ದಾರೆ. ಖಾಸಗಿ ಪಟಾಕಿ ಗೋದಾಮಿನ 30 ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗೋದಾಮಿನಲ್ಲಿದ್ದ ಪಟಾಕಿಗಳು ಭಾರೀ ಸದ್ದಿನಿಂದ ಸಿಡಿದಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಕಟ್ಟಡ ಕುಸಿದಿದ್ದು, ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಡಿಜಿಪಿ ಅಭಾಷ್ ಕುಮಾರ್ ತಿಳಿಸಿದ್ದಾರೆ.
ಇಡೀ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 20 ಮಂದಿ ನೌಕರರು ಕಟ್ಟಡದಲ್ಲಿ ಸಿಲುಕಿಕೊಂಡಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಗಾಯಗೊಂಡಿರುವ 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಲಕಿಗೆ ಲೈಂಗಿಕ ಪೀಡನೆ : ಚಾಲಕನಿಗೆ 20 ವರ್ಷ ಜೈಲು

ಇನ್‌ಸ್ಟಾಗ್ರಾಂ ಸ್ನೇಹವನ್ನು ದುರ್ಬಳಕೆ ಮಾಡಿಕೊಂಡಿದ್ದ ಅಪರಾಧಿ

ಮಂಗಳೂರು : 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಸ್ ಚಾಲಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಪೋಕ್ಸೊ ನ್ಯಾಯಾಧೀಶ ಕೆ. ಎಂ. ರಾಧಾಕೃಷ್ಣ ಸೋಮವಾರ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದ್ದಾರೆ.
ಕಾವೂರು ಮರಕಡ ನಿವಾಸಿ ದಯಾನಂದ ದಾನಣ್ಣವರ್ ಅಲಿಯಾಸ್ ದಯಾನಂದ (30) ಎಂಬಾತಅಪರಾಧಿ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟರಮಣ ಸ್ವಾಮಿ ಈ ಪ್ರಕರಣದಲ್ಲಿ ಬಾಲಕಿ ಪರವಾಗಿ ವಾದಿಸಿದ್ದಾರೆ. ಆರೋಪಿ 13 ವರ್ಷದ ಬಾಲಕಿಯೊಂದಿಗೆ Instagram ಮೂಲಕ ಸ್ನೇಹ ಬೆಳೆಸಿದ್ದ. ಪರಸ್ಪರ ಚಾಟ್ ಮಾಡುತ್ತಿದ್ದರು. ಜನವರಿ 27, 2022 ರಂದು, ಅವಳಿಗೆ ಕರೆ ಮಾಡಿ ತನ್ನೊಂದಿಗೆ ಬರುವಂತೆ ಆಹ್ವಾನಿಸಿದ್ದಾನೆ. ಆದರೆ, ಬಾಲಕಿ ನಿರಾಕರಿಸಿದ್ದಾಳೆ. ಮರುದಿನ ತನ್ನೊಂದಿಗೆ ಬರುವಂತೆ ಅವಳನ್ನು ಒಪ್ಪಿಸಲು ಅವನು ಯಶಸ್ವಿಯಾದ. ಅವಳು ಬಸ್ ನಿಲ್ದಾಣದ ಬಳಿ ಬಂದಾಗ ಆಟೋರಿಕ್ಷಾದಲ್ಲಿ ಹಂಪನಕಟ್ಟೆಯ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಅವಳನ್ನು ಅವಳ ಮನೆಯ ಬಳಿ ಬಿಟ್ಟುಹೋಗಿ ಐಾರಿಗೂಹೇಳದಂತೆ ಬೆದರಿಕೆ ಹಾಕಿದ್ದ.
ಘಟನೆ ಬಗ್ಗೆ ತಿಳಿದ ಬಾಲಕಿಯ ಪೋಷಕರು ಮರುದಿನ ಪೊಲೀಸರಿಗೆ ದೂರು ನೀಡಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬದುಕಿಗೆ ಹೊಸ ಹೊಂಗಿರಣದ ಚೆಲುವಿನ ಯುಗಾದಿ

0

ಯುಗಾದಿಯೇ ನಮಗೊಂದು ಹೊಸ ಸಂಕಲ್ಪದ ಸಂಕೇತ

ಇಂದು ಯುಗಾದಿ ಹಬ್ಬ ಹೊಸ ವರುಷದ ಸಂಭ್ರಮ ನೂತನ ಸಂವತ್ಸರವಾಗಿ ಶೋಭಕೃತದ ಆಗಮನ. ಕಾಲಚಕ್ರ ತಿರುಗುತ್ತಲೇ ಇದೆ. ಪ್ರಕೃತಿಯಲ್ಲೂ ಚಲನಶೀಲತೆಯ ಹೊಸ ಕ್ರಿಯಾಶೀಲತೆಯ ಸೌಂದರ್ಯದ ಹೂರಣ. ಜೀವನೋತ್ಸವದ ಚೈತನ್ಯ ಇದು. ಫಲಪ್ರದಾಯಕವಾಗಲೆಂದು ಬದುಕಿಗೆ ಹೊಸ ಹೊಂಗಿರಣದ ಚೆಲುವಿನ ಯುಗಾದಿ.
ಯುಗಾದಿ ಹೆಸರೇ ಸೂಚಿಸುವಂತೆ ಯುಗದ ಆದಿ. ಅಂದರೆ ಹೊಸ ವರ್ಷದ ಪ್ರಾರಂಭವೆನ್ನುವ ಅರ್ಥ ಸೂಚಿಸಿದರೆ ಒಟ್ಟಂದದಲ್ಲಿ ಯುಗಾದಿ ಪ್ರಕೃತಿಯ ಚೆಲುವಾಗಿದೆ. ಪ್ರಕೃತಿಯ ಮಡಿಲಲ್ಲಿ ಬೆಳಗುತ್ತಿರುವ ಹೊಸತನದೆಡೆಗೆ ಸಾಗುವ ಸಕಲ ಜೀವ ರಾಶಿಗಳಿಗೆ ಹರ್ಷದಾಯಕವಾದ ಹೊಸ ವರ್ಷದ ಆರಂಭ ಇದಾಗಿದೆ. ಹೊಸ ಹೊಸ ಕನಸುಗಳು ಸಾಕಾರಗೊಳಿಸಲು ಸಂಕಲ್ಪ ಕೈಗೊಳ್ಳಲು ಇದು ಶುಭ ಮುಹೂರ್ತದ ಶುಭ ದಿನವಾಗಿದೆ. ಪ್ರಕೃತಿಯ ಹಸಿರ ಚೆಲುವಿನಲ್ಲಿ ಮನವು ಹಸಿರಾಗಿ ಸಮೃದ್ಧವಾಗಿಸುವ ಸಂಭ್ರಮ ದಿನ. ಸನಾತನ ಸಂಸ್ಕೃತಿಯ ಪರಂಪರೆಯಲ್ಲಿ ವಿಶಿಷ್ಟವಾಗಿ ಆಚರಿಸುವ ಶುಭ ಮೂಹೂರ್ತದ ಚಾಂದ್ರಮಾನ ಯುಗಾದಿ ಇದು. ಬೇವು ಬೆಲ್ಲವನ್ನು ಹಂಚಿಕೊಳ್ಳುವ ಪರಿ ಈ ದಿನದ ವಿಶೇಷವಾಗಿದೆ. ನಮ್ಮ ಚಿಂತನೆಗಳು ಎಲ್ಲರಿಗೂ ಸಿಹಿಯಂತೆ ಹಿತವನ್ನು ನೀಡುವಂತಿರಲಿ. ಕಹಿ ಘಟನೆಗಳು ಅಳಿದು ಹೋಗಲಿ.
ವರಕವಿ ದ. ರಾ. ಬೇಂದ್ರೆಯವರ ಯುಗಾದಿ ಕವನದ ಸಾಲುಗಳು ನಮಗೆಲ್ಲ ಈ ಸಂದರ್ಭದಲ್ಲಿ ಮತ್ತೆ ಮತ್ತೆ ನೆನಪಾಗುವುದು ಹೀಗೇ…

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ವರುಷಕ್ಕೊಂದು ಹೊಸತು ಜನ್ಮ
ಹರುಷಕ್ಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕ್ಕೆ…

ಎಂದ ಕವಿ ಸಹಜ ಜೀವನದ ಗತಿಯಲ್ಲೂ ಹೊಸದೊಂದು ಸಂಭ್ರಮವಿದೆ. ನಿತ್ಯ ನೂತನವಾಗಿದೆ ಎಂದು ಹೇಳಿದ್ದಾರೆ.
ಪ್ರಕೃತಿಯ ಚೆಲುವು ಎಷ್ಟು ಚೆಂದವೆಂದರೆ ತುಂಬಿ ಸೊಂಪಾಗಿ ಬೆಳೆದು ನಿಂತಿರುವ ಮಾಮರಗಳು, ನರುಗಂಪಿನ ಉದರದಲಿ ಚಿಗುರಿನ ಸವಿಯ ಸವಿದು ಹಾಡುವ ಕೋಕಿಲಗಳು…
ಚಿತ್ರಗೀತೆಯ ಕವಿ ಚಿತ್ರಿಸಿದಂತೆ
ಮಾಮರವೆಲ್ಲೋ ಕೋಗಿಲೆಯಲ್ಲೋ…ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ…
ಎನ್ನುವಂತೆ ಈ ಪ್ರಕೃತಿಯ ಭಾಷೆಯಲ್ಲಿ ಎಲ್ಲರನ್ನೂ ಒಂದಾಗಿಸುವ ಸಂಬಂಧವನ್ನು ಮೂಡಿಸುವ ಸಂದೇಶದ ಹಬ್ಬದ ಯುಗಾದಿ.
ಹೊಸ ಒಂದು ಚೈತನ್ಯದಾಯಕವಾದ ಯುಗದ ಆದಿಯ ಪ್ರಾರಂಭದ ಹಬ್ಬವಾಗಿ ಹಬ್ಬಹರಿದಿನಗಳು ಸಡಗರ ಸಂಭ್ರಮಗಳಿಂದ ಗರಿಗೆದರುತ್ತಿರುತ್ತವೆ. ಊರ ದೇವಳದ ದೇವರು ಊರ ಜಾತ್ರೆಯಲ್ಲಿ ಮತ್ತೆ ಪ್ರಸನ್ನಗೊಳ್ಳುತ್ತಿದ್ದಾನೆ.
ವಸಂತಮಾಸ ಕಳೆದು ಪ್ರಕೃತಿಯು ತಪದಿಂದ ಹೊರಬಂದು ಚೈತ್ರ ಮಾಸದ ಹಸಿರ ನಗು ಎಲ್ಲೆಲ್ಲೂ ಸೂಸುತ್ತಿದೆ.
ಯುಗಾದಿ ನಮಗೆ ಮತ್ತೆ ಹೊಸ ಬದುಕಿನ ಭಾಗ್ಯದ ಬಾಗಿಲು ತೆರೆಯಲಿ ಎಂದು ಪ್ರತಿಯೊಬ್ಬರಿಗೊಬ್ಬರೂ ಹಾರೈಸೋಣ. ಸರ್ವರಿಗೂ ಸದಾಶಯವನು ಸಾರುವ ಸುಂದರ ಕ್ಷಣಗಳ ಹಬ್ಬ ಇದಾಗಿದೆ. ಪ್ರಕೃತಿಯ ಚೆಲುವನ್ನು ಕಾಪಾಡುವ ನಿಸರ್ಗದ ಹಸಿರಿನ ನೋಟವೆಲ್ಲ ಉಸಿರಿಗೆ ಚೈತನ್ಯವನ್ನು ತುಂಬಲು ಈ ಸುಂದರ ಪ್ರಕೃತಿಯ ಸಂರಕ್ಷಣೆಯಲಿ ಪ್ರಕೃತಿ ಹಾಗೂ ಬದುಕಿನ ಸಮೃದ್ಧತೆಯನ್ನು ಕಾಪಾಡೋಣವೆಂದು ಇಂದಿನಿಂದಲೇ ಪ್ರತಿಯೊಬ್ಬರೂ ಸಂಕಲ್ಪ ತೊಡೋಣ ಈ ಯುಗಾದಿಯೇ ನಮಗೊಂದು ಹೊಸ ಸಂಕಲ್ಪದ ಸಂಕೇತವೆಂದೇ ಭಾವಿಸೋಣ
ಮನುಜ ಕುಲಕ್ಕೆ ಒಳಿತು ಬಯಸುವ ಭರತ ಭೂಮಿಯ ಸಂಸ್ಕೃತಿಯಲ್ಲಿ ಮಹಾಪರ್ವಗಳೇ….ಜನರ ಸಂಸ್ಕೃತಿಯ ಬಿಂಬವಾಗಿದೆ. ಪ್ರತಿಯೊಬ್ಬರ ಮುಖದಲ್ಲೂ ನಗೆಯರಳಿಸುವ ಸೌಹಾರ್ದದ ಬದುಕು ನಮ್ಮದಾಗಲಿ. ಬೇವು ಬೆಲ್ಲವ ಹಂಚುತ್ತಾ ಕಷ್ಟ ಸುಖಗಳನ್ನು .ಸಮಾನವಾಗಿ ಸ್ವೀಕರಿಸುತ್ತಾ ಮಾನವತೆಯಿಂದ ಮಾನವೀಯ ಮೌಲ್ಯಗಳಿಂದ ಬದುಕಿನ ಸಾರ್ಥಕತೆಯನ್ನು ಸಾರೋಣ.ಇದೀಗ ದೇಶದಲ್ಲಿ ಅಲ್ಲಲ್ಲಿ ತಲೆದೋರುವ ಮತಧರ್ಮ ಚಿಂತನೆಗಳು ಮನುಕುಲದ ಹಿತವನ್ನು ಬಯಸುವಂತಿರಲಿ ಎಂದು ಹೇಳುವಲ್ಲಿ
ಹಣತೆಯ ಕವಿ
ಡಾ. ಜಿ.ಎಸ್. ಶಿವರುದ್ರಪ್ಪನವರ ಕವಿತೆ ಮತ್ತೆ ಒಂದಾಗಿ ಬಾಳೋಣ ಎಂಬ ಸಂದೇಶದಿಂದ ಸಮಾಜಹಿತಕ್ಕೆ ನಾವೆಲ್ಲರೂ ಸಂಕಲ್ಪ ತೊಡಬೇಕಾದ ಕರೆಯನ್ನು ಹೀಗೆ ಹಾಡುತ್ತಾರೆ.

ಸುತ್ತಲೂ ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ
ಬಿರುಗಾಳಿಗೂ ಹೊಯ್ಡಾಡುವ ಹಡಗನು
ಎಚ್ಚರದಲ್ಲಿ ಮುನ್ನಡೆಸೋಣ…
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ ಸಂಶಯಗಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ…..

ಎಂಬ ಸದಾಶಯ ಸಾರ್ವಕಾಲಿಕ ಮೌಲ್ಯಗಳನ್ನು ಜಗದೆಲ್ಲೆಡೆ ಸಾರೋಣ. ಈ ಕವಿತೆಯ ಸಾರಾರ್ಥವನು ತಿಳಿದು ನಾವು ಐಕ್ಯತೆಯನು ಎತ್ತಿ ಹಿಡಿಯೋಣ, ರಾಷ್ಟ್ರೀಯ ಭಾವೈಕ್ಯತೆಯ ಭಾರತದಲ್ಲಿ ಕೋಟಿ ಕೋಟಿ ಭಾರತೀಯರು ನಾವು ಎಂದೆಂದೂ ಒಂದಾಗಿರೋಣ ನಮ್ಮ ದೇಶ ಜಗದ್ಗುರು ಭಾರತವೆನಿಸಿದೆ ಈ ಮಹಾಗುರುವಿನ ಪದತಲದಲ್ಲಿ ನಾವುಗಳು ಈ ಮಣ್ಣಿನ ಶ್ರೇಷ್ಠ ಸಂಸ್ಕೃತಿಯ ಸತ್ವವನ್ನು ನಮ್ಮ ಹಿತವಾದ ನಡೆ ನುಡಿಗಳಿಂದ ಜಗದಗಲ ಸಾರೋಣ.
ಎಲ್ಲರಿಗೂ ಶೋಭಕೃತ್ ನಾಮ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು.
ಗಣೇಶ್ ಜಾಲ್ಸೂರು
ಶಿಕ್ಷಕರು ಕಾರ್ಕಳ

ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಮತ್ತೆ ಬೆದರಿಕೆ ಕರೆ

ಬೆಂಗಳೂರಿನ ಯುವತಿ ಫೋನ್‌ ನಂಬರ್‌ನಿಂದ ಕರೆ

ಹೊಸದಿಲ್ಲಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮತ್ತೊಮ್ಮೆ ಬೆದರಿಕೆ ಬಂದಿದೆ. ಕರೆ ಮಾಡಿದವರು ಅವರ ಮನೆ ಮತ್ತು ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕರೆ ಮಾಡಿದ ವ್ಯಕ್ತಿ ತನ್ನ ಹೆಸರನ್ನು ಜಯೇಶ್ ಪೂಜಾರಿ ಎಂದು ಪರಿಚಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಡ್ಕರಿಗೆ ಬೆದರಿಕೆ ಕರೆ ಬರುತ್ತಿರುವುದು ಇದೇ ಮೊದಲಲ್ಲ. ಹಿಂದಿನ ಸಲ ಕರೆ ಮಾಡಿದಾಗ 100 ಕೋಟಿ ರೂಪಾಯಿ ನೀಡುವಂತೆ ಕೇಳಿದ್ದರು. ಆದರೆ ಈ ಬಾರಿ 10 ಕೋಟಿ ರೂ.ಗೆ ಬೆದರಿಕೆ ಕರೆ ಮಾಡಿದ್ದಾರೆ. ನಾಗಪುರದ ಖಮ್ಲಾದಲ್ಲಿರುವ ನಿತಿನ್ ಗಡ್ಕರಿ ಅವರ ಕಚೇರಿಯಿಂದ ಈ ಸಂಬಂಧ ದೂರು ದಾಖಲಿಸಲಾಗಿದೆ. ಇದಾದ ಬಳಿಕ ನಾಗ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಡ್ಕರಿ ಅವರ ಖಮ್ಲಾ ಕಚೇರಿಗೆ ಫೋನ್‌ ಕರೆ ಬಂದಿತ್ತು.ಈ ಬಾರಿ ಕರೆ ಮಾಡಿದವರು ಮನೆ ಮತ್ತು ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕರೆಗೆ ಬಳಸಲಾದ ಸಂಖ್ಯೆ ಬೆಂಗಳೂರಿನ ಯುವತಿಗೆ ಸಂಬಂಧಿಸಿದ್ದು. ಆ ಯುವತಿ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ಸ್ನೇಹಿತ ಜೈಲಿನಲ್ಲಿದ್ದಾನೆ. ನಾಗಪುರ ಪೊಲೀಸರು ಫೋನ್‌ ನಂಬರ್‌ ಬೆನ್ನುಹತ್ತಿ ಶೋಧ ಶುರುಮಾಡಿದ್ದಾರೆ.
ಈ ವರ್ಷದ ಜನವರಿಯಲ್ಲಿ ನಿತಿನ್ ಗಡ್ಕರಿ ಅವರ ನಿವಾಸ ಮತ್ತು ಕಚೇರಿಗೆ ಇದೇ ರೀತಿಯ ಬೆದರಿಕೆ ಕರೆಗಳು ಬಂದಿದ್ದವು. ಜನವರಿ 14ರಂದು ಕರೆ ಮಾಡಿದ ವ್ಯಕ್ತಿ ತನ್ನನ್ನು ದಾವೂದ್ ಇಬ್ರಾಹಿಂ ಗ್ಯಾಂಗ್ ಸದಸ್ಯ ಎಂದು ಪರಿಚಯಿಸಿಕೊಂಡು 100 ಕೋಟಿ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ.
ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಗೆ 11.25 ಮತ್ತು ಮಧ್ಯಾಹ್ನ 12.30ರ ನಡುವೆ ಕರೆಗಳು ಬಂದಿದ್ದವು. ಆದ್ದರಿಂದ ನಾಗಪುರ ಸಂಸದರ ಮನೆ ಮತ್ತು ಕಚೇರಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕರೆ ಮಾಡಿದ ವ್ಯಕ್ತಿ ತಾನು ಜಯೇಶ್‌ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಗಡ್ಕರಿ ಅವರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಕರೆ ಮಾಡಿದ ವ್ಯಕ್ತಿ ಹಿಂಡಲಗಾ ಜೈಲಿನಲ್ಲಿ ಕೈದಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಮರಣದಂಡನೆಯನ್ನೂ ವಿಧಿಸಿತ್ತು. ಜೈಲಿನಿಂದಲೇ ಈ ಫೋನ್ ಕರೆ ಮಾಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ಬೆದರಿಕೆ ಕರೆಗಳ ಕಾರಣ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಮನೆ ಮತ್ತು ಕಚೇರಿಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಿತಿನ್ ಗಡ್ಕರಿ ಅವರಿಗೆ ಈಗಾಗಲೇ ಝಡ್‌ ಪ್ಲಸ್‌ ಭದ್ರತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾ.27 : ವಿಶ್ವ ರಂಗಭೂಮಿ ದಿನಾಚರಣೆ

ಯಕ್ಷ ರಂಗಾಯಣದಲ್ಲಿ ‘ಮಕ್ಕಳ ಮಾಯಾಲೋಕ’ ನಾಟಕ ಪ್ರದರ್ಶನ

ಕಾರ್ಕಳ : ಯಕ್ಷ ರಂಗಾಯಣ ಕಾರ್ಕಳ ಆಶ್ರಯದಲ್ಲಿ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ಮತ್ತು ರಂಗ ಸಂಸ್ಕೃತಿ ಕಾರ್ಕಳ ಇದರ ಸಹಕಾರದೊಂದಿಗೆ ಮಾ.27ರಂದು ಸಂಜೆ 6.30ಕ್ಕೆ ಕಾರ್ಕಳ ಕೋಟಿ-ಚೆನ್ನಯ ಥೀಂ ಪಾರ್ಕ್‌ನ ವನರಂಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಮಕ್ಕಳ ಮಾಯಾಲೋಕ ನಾಟಕ ಪ್ರದರ್ಶನ ನಡೆಯಲಿದೆ.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಯಕ್ಷ ರಂಗಾಯಣದ‌ ನಿರ್ದೇಶಕ ಡಾ| ಜೀವನ್ ರಾಂ ಸುಳ್ಯ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯ, ರಂಗಕರ್ಮಿ ಡಾ.ಬಿ.ವಿ.ರಾಜಾರಾಂ ಪ್ರಧಾನ ಭಾಷಣ ಮಾಡಲಿದ್ದಾರೆ. ರಂಗನಿರ್ದೇಶಕ ಕೆ.ಜಿ.ಕೃಷ್ಣಮೂರ್ತಿ ಹೆಗ್ಗೋಡು ಮತ್ತು ರಂಗ ಸಂಸ್ಕೃತಿ ಕಾರ್ಕಳ ಇದರ ಅಧ್ಯಕ್ಷ ಎಸ್.ನಿತ್ಯಾನಂದ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಳಿಕ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದ್ರೆ ಇದರ ಕಲಾವಿದರು ಅಭಿನಯಿಸುವ ಮಕ್ಕಳ ಮಾಯಾಲೋಕ ನಾಟಕ ಪ್ರದರ್ಶನಗೊಳ್ಳಲಿದೆ.

ಅದ್ಭುತ ರಮ್ಯ ಮಕ್ಕಳ ಮಾಯಾಲೋಕ

ಮಕ್ಕಳ ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸಿದ ನಾಟಕ ಮಕ್ಕಳ ಮಾಯಾಲೋಕ. ಸಿ.ಎಸ್.ಲೆವಿಸ್ ಅವರ ರಷ್ಯನ್ ಮೂಲದ ಕತೆಯನ್ನು ಕೆ.ಜಿ.ಕೃಷ್ಣಮೂರ್ತಿ ರಚಿಸಿದ್ದು, ರಂಗಮಾಂತ್ರಿಕ ಜೀವನ್ ರಾಂ ಸುಳ್ಯ‌ ನಿರ್ದೇಶಿಸಿದ್ದಾರೆ. ಈಗಾಗಲೇ ದಿಲ್ಲಿ ಸೇರಿ ರಾಜ್ಯಾದ್ಯಂತ 375ಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡ ಬಹುಬೇಡಿಕೆಯ ನಾಟಕವಾಗಿದೆ. ಪರಿಸರ ಕಾಳಜಿ, ಮನುಷ್ಯ ಪ್ರಾಣಿಗಳ ಸಹಜ ಪ್ರೀತಿ ಸಂಬಂಧದ ಬಗ್ಗೆ ಎಳೆಎಳೆಯಾಗಿ ಫ್ಯಾಂಟಸಿ ದೃಶ್ಯಗಳ ಮೂಲಕ ನಾಟಕ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಕ್ಷಣಮಾತ್ರದಲ್ಲಿ ಬದಲಾಗುವ ದೃಶ್ಯವೈಭವ, ಕಲಾವಿದರ ಪರಿಪಕ್ವ ಅಭಿನಯ, ಸುಶ್ರಾವ್ಯ ಸಂಗೀತ, ಸ್ಪಷ್ಟ ಕನ್ನಡ ಮಾತುಗಾರಿಕೆ, ಪ್ರಾಣಿ ಮುಖವಾಡಗಳ ಬಳಕೆ, ವಿಶೇಷ ವಸ್ತ್ರ ವಿನ್ಯಾಸ, ಬೆಳಕಿನ ಸಂಯೋಜನೆ-, ರಂಗಪರಿಕರಗಳು, ಜಾದೂ ತಂತ್ರಗಳು ಮುಂತಾದವುಗಳಿಂದ ಕಟ್ಟಲ್ಪಟ್ಟ ಈ ನಾಟಕ ಪ್ರತಿಕ್ಷಣ ನೋಡುಗರನ್ನು ಬೆರಗುಗೊಳಿಸಲಿದೆ.
ಸಮಯಕ್ಕೆ ಸರಿಯಾಗಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ಆಸಕ್ತರು ತಮ್ಮ ಮಕ್ಕಳೊಂದಿಗೆ ಹತ್ತು ನಿಮಿಷ ಮುಂಚಿತವಾಗಿ ಬರಬೇಕೆಂದು ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ತಿಳಿಸಿದ್ದಾರೆ.

ಪಾಕಿಸ್ಥಾನದಲ್ಲಿ ಪ್ರಬಲ ಭೂಕಂಪ : 9 ಸಾವು

ದಿಲ್ಲಿ, ಉತ್ತರ ಪ್ರದೇಶದಲ್ಲೂ ಕಂಪಿಸಿದ ಭೂಮಿ

ಇಸ್ಲಾಮಾಬಾದ್ : ಪಾಕಿಸ್ಥಾನ ಮತ್ತು ಅಫ್ಘಾನಿಸ್ತಾನದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿ ಪಾಕಿಸ್ಥಾನದ ವಾಯವ್ಯ ಖೈಬರ್ ಪಖ್ತೂನ್‌ಕ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ದಿಲ್ಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದಾದ್ಯಂತ ಈ ಭೂಕಂಪದಿಂದ ಅನುಭವವಾಗಿದೆ. ಇಲ್ಲೂ ಪ್ರಬಲವಾದ ಕಂಪನ ಸಂಭವಿಸಿದೆ. ಮಂಗಳವಾರದಂದು 6.6 ತೀವ್ರತೆಯ ಭೂಕಂಪವು ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದ ಬಹುಭಾಗವನ್ನು ತಲ್ಲಣಗೊಳಿಸಿದೆ. ಭಯಭೀತರಾದ ನಿವಾಸಿಗಳು ಮನೆಗಳು ಮತ್ತು ಕಚೇರಿಗಳಿಂದ ಹೊರಗೋಡಿದ್ದಾರೆ. ದೂರದ ಹಳ್ಳಿಗಳಲ್ಲೂ ಜನರಿಗೆ ಭೂಕಂಪದ ಅನುಭವವಾಗಿ ಭಯಭೀತರಾಗಿದ್ದಾರೆ..
ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಇಂದು ಕಾಶ್ಮೀರದ ಶಾರದಾ ಪೀಠದಲ್ಲಿ ಶಾರದೆಯ ವಿಗ್ರಹ ಪ್ರತಿಷ್ಠಾಪನೆ

ಶೃಂಗೇರಿ ಮಠದಿಂದ ಒಯ್ದ ವಿಗ್ರಹ

ಶ್ರೀನಗರ : ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯಿರುವ ಶಾರದಾಪೀಠದಲ್ಲಿ ಶಾರದೆಯ ವಿಗ್ರಹ ಪ್ರತಿಷ್ಠಾಪನೆಯ ಐತಿಹಾಸಿಕ ಕಾರ್ಯಕ್ರಮ ಇಂದು ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿಲ್ಲಿಯಿಂದ ವಚುವಲ್‌ ಆಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 1947ರಲ್ಲಿ ಕಾಶ್ಮೀರವನ್ನು ಆಕ್ರಮಿಸಿದ ಪಾಕಿಸ್ಥಾನದ ಮತಾಂಧರು ಶಾರದಾ ಪೀಠ ಮತ್ತು ಅದರ ಪಕ್ಕದಲ್ಲಿದ್ದ ಗುರುದ್ವಾರವನ್ನು ನಾಶ ಮಾಡಿದ್ದರು. ಇದೀಗ 76 ವರ್ಷಗಳ ಬಳಿಕ ಕುಪ್ವಾರದ ತೀತ್ವಾಲ್‌ನಲ್ಲಿರುವ ದೇವಿಯ ದೇವಾಲಯವನ್ನು ಪುನರ್‌ ನಿರ್ಮಿಸಲಾಗಿದೆ.
ವಿಶೇಷವೆಂದರೆ ಶಾರದೆಯ ವಿಗ್ರಹವನ್ನು ಶೃಂಗೇರಿ ಮಠದಿಂದ ಇಲ್ಲಿಗೆ ತರಲಾಗಿದೆ. ಕಾಶ್ಮೀರದಲ್ಲಿ ನವರೇಹ್‌ ಎಂದು ಕರೆಯಲ್ಪಡುವ ಹಿಂದುಗಳ ವರ್ಷಾರಂಭದ ಯುಗಾದಿ ದಿನವೇ ಶಾರದೆಯ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕದ ಶೃಂಗೇರಿ ಮಠದ 100 ಮಂದಿ ಅರ್ಚಕರು ಕಾಶ್ಮೀರಕ್ಕೆ ತೆರಳಿದ್ದಾರೆ.
ದೇಶ ವಿಭಜನೆಯ ಮೊದಲು ಟೀಟ್ವಾಲ್ ಶಾರದಾ ದೇವಿಯ ದೇವಾಲಯದ ಐತಿಹಾಸಿಕ ಮೂಲ ನೆಲೆಯಾಗಿತ್ತು. 1947ರಲ್ಲಿ ಕಿಶನ್‌ಗಂಗಾ ನದಿಯ ದಡದಲ್ಲಿರುವ ದೇವಾಲಯ ಮತ್ತು ಪಕ್ಕದ ಗುರುದ್ವಾರವನ್ನು ಮುಸ್ಲಿಮ್‌ ದಾಳಿಕೋರರು ನಾಶಪಡಿಸಿದ್ದರು.

ಸೆಂಟ್ರಲ್ ಬ್ಯಾಂಕ್‌ನಲ್ಲಿ 5,000 ಅಪ್ರೆಂಟಿಸ್ ಹುದ್ದೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏ.3

ಹೊಸದಿಲ್ಲಿ : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 5,000 ಅಪ್ರೆಂಟಿಸ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಿದೆ. ಅರ್ಹ ಅಭ್ಯರ್ಥಿಗಳು Centralbankofindia.co.inನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 3, 2023. ಆನ್‌ಲೈನ್ ಪರೀಕ್ಷೆಯನ್ನು ಏಪ್ರಿಲ್ ಎರಡನೇ ವಾರದಲ್ಲಿ ನಡೆಸಲಾಗುತ್ತದೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ವಿದ್ಯಾರ್ಹತೆಗಳನ್ನು ಹೊಂದಿರಬೇಕು.ಅಭ್ಯರ್ಥಿಯ ವಯೋಮಿತಿ 20 ವರ್ಷದಿಂದ 28 ವರ್ಷಗಳ ನಡುವೆ ಇರಬೇಕು.

error: Content is protected !!