ಕುಕ್ಕುಂದೂರು ಸಭೆಯಲ್ಲಿ ಅವಹೇಳನಕ್ಕೆ ಅವಕಾಶ ಕೊಡದಂತೆ ಪೊಲೀಸರಿಗೆ ಮನವಿ

ಜನತೆ ದಂಗೆ ಏಳುವ ಪರಿಸ್ಥಿತಿ ಸೃಷ್ಟಿಸಬೇಡಿ ಎಂದು ಆಗ್ರಹ

ಉಡುಪಿ: ಕಾರ್ಕಳದ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆ.24ರಂದು ಸೌಜನ್ಯಾ ಪರ ನ್ಯಾಯಕ್ಕಾಗಿ ಆಗ್ರಹಿಸಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಆಯೋಜಿಸಲು ಉದ್ದೇಶಿಸಿರುವ ಪ್ರತಿಭಟನೆ ಸಭೆಯಲ್ಲಿ ಶ್ರೀ ಕ್ಷೇತ್ರ‌ ಧರ್ಮಸ್ಥಳದ ಬಗ್ಗೆ ಧರ್ಮಾಧಿಕಾರಿ ಡಾಕ್ಟರ್ ಡಿ. ವಿರೇಂದ್ರ ಹೆಗ್ಗಡೆಯವರ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಾಕಾರಿಯಾಗಿ ಮಾತನಾಡದಂತೆ ಮುಚ್ಚಳಿಕೆ ಬರೆಸಿಕೊಳ್ಳಬೇಕು ಮತ್ತು ಹೈಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಆಗ್ರಹಿಸಿ ಶ್ರಿ ಕ್ಷೇತ್ರ ಧರ್ಮಸ್ಥಳ ಹಿತರಕ್ಷಣಾ ಸಮಿತಿ ಕಾರ್ಕಳ ವತಿಯಿಂದ ಉಡುಪಿ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾಧ್ಯಮ ದವರೊಂದಿಗೆ ಮಾತನಾಡಿದ ಹಿತರಕ್ಷಣಾ ಸಮಿತಿ ಪ್ರಮುಖರಾದ ಮಹೇಶ್ ತುಪ್ಪೆಕಲ್ಲು, ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಉಡುಪಿ ಜಿಲ್ಲೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಮತ್ತು ಖಾವಂದರ ಮಾನಹಾನಿ ಮಾಡುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಕಾನೂನಿನ ಆದೇಶ ಇದ್ದರೂ ಕೂಡಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತವಾದ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಇದಕ್ಕಾಗಿ ಶಾಂತಿಪ್ರಿಯ ಧರ್ಮಸ್ಥಳದ ಅಭಿಮಾನಿಗಳು ಲಕ್ಷಾಂತರ ಮಂದಿ ಇದ್ದಾರೆ.‌ ಇಂದು ಎಸ್‌ಪಿಯವರಿಗೆ ಮನವಿ ಸಲ್ಲಿಸಿದ್ದೇವೆ. ಇಂತಹ ಕಾರ್ಯಕ್ರಮಗಳು ನಿಲ್ಲಬೇಕಾದರೆ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಆಗಬೇಕಾದ ಅನಿವಾರ್ಯತೆ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ನಾವು ಶಾಂತಿಪ್ರಿಯರು ಅಂತಹ ಕೆಲಸ ಮಾಡಲು ಸಿದ್ಧರಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷಾಂತರ ಭಕ್ತಾದಿಗಳು ಇದ್ದು ಅವರು ಯಾವಾಗ ಸಿಡಿದೇಳುತ್ತಾರೆ ಎಂದು ಹೇಳುವುದು ಸಾಧ್ಯವಿಲ್ಲ. ಉಡುಪಿ ಜಿಲ್ಲೆಯಲ್ಲಿ ಜನತೆ ದಂಗೆ ಏಳುವ ಪರಿಸ್ಥಿತಿಯನ್ನು ಜಿಲ್ಲಾಡಳಿತ ನಿರ್ಮಾಣ ಮಾಡುವುದು ಬೇಡ ಎಂಬುವುದು ನಮ್ಮ ಬೇಡಿಕೆ ಎಂದರು.
ಮನವಿ ಸ್ವೀಕರಿಸಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಡಾ.ಅರುಣ್ ಕೆ. ಹೈಕೋರ್ಟ್ ಆದೇಶದ ಪ್ರಕಾರ ಕಾನೂನು ಮತ್ತು ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ‌ ನೀಡಿದರು.







































































error: Content is protected !!
Scroll to Top