90 ಎಂಎಲ್ನ 10 ಪೊಟ್ಟಣ ಮದ್ಯ ಕುಡಿದು ಸಾವು
ಹಾಸನ : ಇಡ್ಲಿ ತಿನ್ನುವ ಸ್ಪರ್ಧೆ, ಐಸ್ಕ್ರೀಮ್ ತಿನ್ನುವ ಸ್ಪರ್ಧೆಯಂತೆ ಹಾಸನದಲ್ಲಿ ಎಣ್ಣೆ ಹೊಡೆಯೋ ಸ್ಪರ್ಧೆ ಏರ್ಪಡಿಸಲಾಗಿತ್ತು. ಆದರೆ ಈ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ವ್ಯಕ್ತಿ, ಅದನ್ನು ಸ್ವೀಕರಿಸುವ ಮೊದಲೇ ಗೊಟಕ್ ಎಂದಿದ್ದಾನೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜ್ ಮತ್ತು ತಿಮ್ಮೇಗೌಡ ಎಂಬಿಬ್ಬರು ಅರ್ಧ ಗಂಟೆಯಲ್ಲಿ 90 ಎಂಲ್ನ 10 ಪ್ಯಾಕ್ ಮದ್ಯ ಕುಡಿಯುವ ಬಾಜಿ ಕಟ್ಟಿದ್ದರು. ಸ್ಪರ್ಧೆಯಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ತಿಮ್ಮೇಗೌಡ (60) ಸಾವನ್ನಪ್ಪಿದ್ದಾರೆ. ಇಬ್ಬರಿಗೂ ಕೃಷ್ಣೇಗೌಡ ಎಂಬಾತ ಮದ್ಯದ ಪ್ಯಾಕೆಟ್ಗಳನ್ನು ನೀಡಿದ್ದ. ಚಾಲೆಂಜ್ ಗೆಲ್ಲಲು ಮದ್ಯ ಕುಡಿದು, ರಕ್ತ ವಾಂತಿ ಮಾಡಿಕೊಂಡು ತಿಮ್ಮೇಗೌಡ ಬಸ್ ನಿಲ್ದಾಣದಲ್ಲೇ ಬಿದ್ದಿದ್ದ. ತಿಮ್ಮೇಗೌಡ ಅಸ್ವಸ್ಥ ಆಗುತ್ತಲೆ ದೇವರಾಜು ಮತ್ತು ಕೃಷ್ಣೇಗೌಡ ಸ್ಥಳದಿಂದ ಪಲಾಯನ ಮಾಡಿದ್ದಾರೆ.
ತಿಮ್ಮೇಗೌಡನನ್ನು ಗ್ರಾಮಸ್ಥರು ಮನೆಗೆ ಕರೆತಂದು ಬಿಟ್ಟಿದ್ದರು. ಆದರೆ ಹಬ್ಬಕ್ಕಾಗಿ ತಿಮ್ಮೇಗೌಡನ ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ತಿಮ್ಮೇಗೌಡ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ತಿಮ್ಮೇಗೌಡರ ಪುತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೇವರಾಜು ಹಾಗೂ ಕೃಷ್ಣೇಗೌಡ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.