ಶ್ರೀ ಯಕ್ಷದೇಗುಲ ಕಾಂತಾವರ ವತಿಯಿಂದ ತಾಳಮದ್ದಳೆ
ಕಾರ್ಕಳ : ಮೂಡಬಿದ್ರಿ ಜೈನಮಠದ ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಪಟ್ಟಾಭಿಷೇಕದ ರಜತ ಮಹೋತ್ಸವದ ನಿಮಿತ್ತ ಭಟ್ಟಾರಕ ಭವನದಲ್ಲಿ ಶ್ರೀ ಯಕ್ಷದೇಗುಲ ಕಾಂತಾವರ ಪ್ರಾಯೋಜಿಸಿದ ತಾಳಮದ್ದಳೆ ಕಾರ್ಯಕ್ರಮವನ್ನು ನ್ಯಾಯವಾದಿ, ಸಹಕಾರಿ ಧುರೀಣ ಬಾಹುಬಲಿ ಪ್ರಸಾದ್ ದೀಪ ಬೆಳಗಿ ಉದ್ಘಾಟಿಸಿದರು.
ಆಶೀರ್ವಚನ ನೀಡಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಪರಿಶ್ರಮದಿಂದ ಗಳಿಸಿದ ಜ್ಞಾನವನ್ನು ಮಾತಿನ ಮೂಲಕ ಸಮಾಜಕ್ಕೆ ಹಂಚುವ ಕೆಲಸವನ್ನು ಕಲಾವಿದರು ತಾಳಮದ್ದಲೆ ಮೂಲಕ ಮಾಡುತ್ತಿದ್ದಾರೆ. ಇಂತಹ ಅದ್ಭುತ ಕಲೆಗೆ ಎಲ್ಲರ ಪ್ರೋತ್ಸಾಹ ಅಗತ್ಯವೆಂದರು.
ಮೂಡುಬಿದ್ರಿ ಯಕ್ಷ ಸಂಗಮದ ಶಾಂತರಾಮ ಕುಡ್ವ, ಬೆಳುವಾಯಿ ಯಕ್ಷ ದೇವ ಮಿತ್ರಕಲಾ ಮಂಡಳಿಯ ಎಂ. ದೇವಾನಂದ ಭಟ್, ಜೈನ ಮಠದ ಸಂಜಯಂತ ಕುಮಾರ್, ದಿವಾಕರ ಆಚಾರ್ಯ ಗೇರುಕಟ್ಟೆ, ಡಾ. ಶ್ರುತ ಕೀರ್ತಿರಾಜ ಜೈನ್ ಕಲ್ಲೋಳಿ, ಯುವರಾಜ ಜೈನ್ ಉಪಸ್ಥಿತರಿದ್ದರು. ಯಕ್ಷ ದೇಗುಲದ ಸಂಚಾಲಕ ಮಹಾವೀರ ಪಾಂಡಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಮಹೇಶ್ ಕನ್ಯಾಡಿ ಭಾಗವತಿಕೆಯಲ್ಲಿ ಸುದರ್ಶನ ವಿಜಯ ತಾಳಮದ್ದಳೆ ಜರಗಿತು. ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿ ಮೊಗರು, ಶ್ರುತಕೀರ್ತಿ ರಾಜ್, ದಿವಾಕರ ಆಚಾರ್ಯ, ರವಿರಾಜ ಜೈನ್, ರಂಜಿತ್ ಕಲಾವಿದರಾಗಿ ಸಹಕರಿಸಿದರು.