ಕಾರ್ಕಳ : ಆರ್ಮಿ ಕ್ಯಾಂಪಿಗೆ ಗ್ಯಾಸ್ ಸಿಲಿಂಡರ್ ಪೂರೈಸುವಂತೆ ಕರೆ ಮಾಡಿ ಕಾರ್ಕಳದ ಗ್ಯಾಸ್ ಏಜೆನ್ಸಿಗೆ ಸಾವಿರಾರು ರೂ. ವಂಚನೆ ಎಸೆಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆ. 9ರಂದು ಕಾರ್ಕಳ ತೆಳ್ಳಾರು ರಸ್ತೆಯಲ್ಲಿರುವ ಪ್ರಿಯದರ್ಶಿನಿ ಗ್ಯಾಸ್ ಏಜೆನ್ಸಿ ಮಾಲಕ ಕೃಷ್ಣಮೂರ್ತಿ ಎಂಬವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಕಾರ್ಕಳ ಮಾಳ ಕೂಡಬೆಟ್ಟು ಶಾಲೆಯಲ್ಲಿ ಆರ್ಮಿ ಕ್ಯಾಂಪ್ ಮಾಡಿದ್ದು ಈ ಕ್ಯಾಂಪ್ಗೆ 4 ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವಂತೆ ಕೇಳಿದ್ದನು. ಹೀಗಾಗಿ ಕೃಷ್ಣಮೂರ್ತಿ ಅವರು ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಸುನೀಲ್ ವಿನ್ಸೆಂಟ್ ಮೆನೆಝೆಸ್ ಗೆ ಆ ವ್ಯಕ್ತಿಯನ್ನು ಸಂಪರ್ಕಿಸುವಂತೆ ತಿಳಿಸಿ ಅದರಂತೆ ಸುನೀಲ್ ಕರೆ ಮಾಡಿ ಗ್ಯಾಸ್ ಸರಬರಾಜು ಮಾಡುವ ಬಗ್ಗೆ ವಿಚಾರಿಸಿದಾಗ, ಮೊದಲು ವೆರಿಫೈಗೆಂದು ನೀವು ನಮಗೆ ಹಣ ಹಾಕಬೇಕು, ನಂತರ ತಾವು ದುಪ್ಪಟ್ಟು ಹಣವನ್ನು ವಾಪಾಸು ಕೊಡುತ್ತೇವೆಂದು ಆತ ತಿಳಿಸಿರುತ್ತಾನೆ. ಸುನಿಲ್ ಹಂತಹಂತವಾಗಿ ಒಟ್ಟು 92, 513 ರೂ. ಹಣವನ್ನು ಆರೋಪಿಯ ಖಾತೆಗೆ ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದು, ಆ ವ್ಯಕ್ತಿ ಇಂಡಿಯನ್ ಆರ್ಮಿಯ ಆಫೀಸರ್ ಎಂದು ನಂಬಿಸಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಬಳಿಕ ವಾಪಸ್ ನೀಡದೇ ಮೋಸ ಮಾಡಿರುತ್ತಾನೆ.
ಆರ್ಮಿ ಆಫೀಸರ್ ಎಂದು ನಂಬಿಸಿ ಕಾರ್ಕಳದ ಗ್ಯಾಸ್ ಏಜೆನ್ಸಿಗೆ ವಂಚನೆ
