ತೀವ್ರಗೊಂಡ ಗಣೇಶೋತ್ಸವ ವಿವಾದ
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿರುವ ಗಣೇಶೋತ್ಸವಕ್ಕೆ ಈ ಸಲ ಕುಲಪತಿ ಅನುಮತಿ ನಿರಾಕರಿಸಿರುವ ವಿವಾದ ತೀವ್ರಗೊಳ್ಳುತ್ತಿದೆ. ಹಿಂದೂ ಸಂಘಟನೆಗಳು ಈಗ ಹೋರಾಟಕ್ಕೆ ಇಳಿದಿದ್ದು, ನಿನ್ನೆ ಮಂಗಳೂರು ಸಮೀಪ ಅಸೈಗೋಳಿಯಲ್ಲಿ ನಡೆದ ಸಭೆಯಲ್ಲಿ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಂಗಳೂರು ವಿ.ವಿ ಮಂಗಳ ಸಭಾಂಗಣದಲ್ಲಿ ಗಣೇಶೋತ್ಸವ ಮಾಡಿಯೇ ಸಿದ್ಧ ಎಂದು ಸವಾಲೊಡ್ಡಿದ್ದಾರೆ.
ನನ್ನನ್ನು ಅರೆಸ್ಟ್ ಮಾಡಿದ್ರೆ ತುಂಬಾ ಸಂತೋಷ, ಅರೆಸ್ಟ್ ಆಗದೇ ತುಂಬಾ ಸಮಯ ಆಯ್ತು. ಅರೆಸ್ಟ್ ಮಾಡಿದರೆ ಮಾಡಲಿ, ಅದರಲ್ಲಿ ನನಗೆ ಗಡಿಬಿಡಿ ಇಲ್ಲ. ಮಂಗಳೂರು ವಿ.ವಿ ಮಂಗಳ ಸಭಾಂಗಣದಲ್ಲಿ ಗಣೇಶೋತ್ಸವ ಮಾಡಿಯೇ ಸಿದ್ಧ ಎಂದಿದ್ದಾರೆ.
ಅಸೈಗೋಳಿ ಮೈದಾನದಲ್ಲಿ ಮಂಗಳೂರು ವಿ.ವಿ ಗಣೇಶೋತ್ಸವಕ್ಕೆ ವಿರೋಧ ಹಾಗೂ ಸ್ಟಾಲಿನ್ ಹೇಳಿಕೆ ಖಂಡಿಸಿ ಸಂಘ ಪರಿವಾರ ಹಮ್ಮಿಕೊಂಡ ಸಾಮೂಹಿಕ ಭಜನಾ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹೊರಗಿನವರು ಅಂದರೆ ಯಾರು? ನಾವೆಲ್ಲರೂ ಈ ದೇಶದಲ್ಲಿ ಇರುವವರೇ. ನಾವೆಲ್ಲರೂ ಗಣೇಶನ ಭಕ್ತರೇ ಅಲ್ವಾ? ಒಳಗಿರೋರು ಅಂದ್ರೆ ವಿದ್ಯಾರ್ಥಿಗಳು, ಅವರು ಬೇರೆ ಬೇರೆ ಜಾಗದಿಂದ ಬಂದವರು. ಇಡೀ ರಾಜ್ಯದಿಂದ ಅಲ್ಲಿಗೆ ಜನ ಬಂದಿರ್ತಾರೆ, ಇದರಲ್ಲಿ ಹೊರಗಿನವರು ಅಂತ ಇಲ್ಲ. ನಾವೆಲ್ಲರೂ ವಿವಿ ಗಣೇಶೋತ್ಸವಕ್ಕೆ ಬಂದೇ ಬರ್ತೇವೆ, ಅಲ್ಲಿ ಇರ್ತೇವೆ, ಅದರಲ್ಲಿ ಎರಡು ಪ್ರಶ್ನೆ ಇಲ್ಲ. ಬಂದರೆ ಏನು ಮಾಡ್ತಾರೆ, ಅರೆಸ್ಟ್ ಮಾಡ್ತಾರಾ? ನಾನು ಬಂದೇ ಬರ್ತೇನೆ. ನನ್ನನ್ನು ಅರೆಸ್ಟ್ ಮಾಡಿದ್ರೆ ತುಂಬಾ ಸಂತೋಷ ಎಂದು ಪ್ರಭಾಕರ ಭಟ್ ಗುಡುಗಿದ್ದಾರೆ.
ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಕಿಡಿಕಾರಿರುವ ಅವರು, ಸ್ಪೀಕರ್ ಹಾಗೆಲ್ಲ ಮಾತನಾಡಬಾರದು. ಅವರು ಎಲ್ಲರನ್ನು ಸಮಾನವಾಗಿ ನೋಡಬೇಕು. ನಮ್ಮದು ಧರ್ಮಾಧರಿತ ದೇಶ, ಜಗತ್ತಿನ ಮೋಸ್ಟ್ ಸೆಕ್ಯುಲರ್ ಅಂದರೆ ಹಿಂದು. ನಿಮ್ಮ ದೇವರನ್ನು ನೀವು ಪೂಜೆ ಮಾಡಿ, ನಮ್ಮದಕ್ಕೆ ವಿರೋಧ ಬೇಡ. ವಿವಿ ಅನ್ನೋದು ಹಿಂದೂ ಮೆಜಾರಿಟಿ ಇರುವ ಒಂದು ಸಂಸ್ಥೆ. ಅಲ್ಲಿ ದೇವರನ್ನು ಪೂಜೆ ಮಾಡಬಾರದು ಅಂದ್ರೆ ಏನರ್ಥ. ಸೆಕ್ಯೂಲರ್ ಹೆಸರಿನಿಂದ ಹಿಂದೂಗಳ ಜೀವನಕ್ಕೆ ತೊಂದರೆ ಆಗಿದೆ. ಅವರ ಮಸೀದಿ, ಮನೆಯಲ್ಲಿ ಅಲ್ಲಾನನ್ನೇ ಪೂಜೆ ಮಾಡಲಿ. ಇದು ರಾಷ್ಟ್ರಧರ್ಮ, ಹಾಗಾಗಿ ಮುಸಲ್ಮಾನರು ಗೌರವ ಕೊಡಲಿ. ಎಲ್ಲರೂ ಒಟ್ಟಿಗೆ ಬದುಕಲು ನಾವು ಪರಸ್ಪರ ಗೌರವಿಸಬೇಕು. ವಿವಿಯಲ್ಲಿ ಅಲ್ಲಾನನ್ನ ಪೂಜೆ ಮಾಡೋದಾದ್ರೆ ಮಾಡಲಿ. ಇವರು ನಿನ್ನೆ ಕಮ್ಯುನಿಸ್ಟರಿಗೆ ಕಾರ್ಯಕ್ರಮ ಮಾಡಲು ವಿವಿಯಲ್ಲಿ ಅವಕಾಶ ಕೊಡ್ತಾರೆ. ಹಿಂದೂ ವಿರೋಧಿ ಮಾತನಾಡುವ ಶಂಸುಲ್ ಇಸ್ಲಾಂಗೆ ಅವಕಾಶ ಕೊಡಲಿಲ್ವಾ? ನಮಗೆ ಈಗ ಸಮಸ್ಯೆ ಬಂದಿರೋದು ಕಾಂಗ್ರೆಸ್ನಿಂದ. ಕಾಂಗ್ರೆಸ್ ನಮ್ಮನ್ನು ನಿರ್ವೀರ್ಯರನ್ನಾಗಿ, ಹೇಡಿಗಳನ್ನಾಗಿ ಮಾಡಿತು. ಈಗಲೂ ಪಾಕಿಸ್ಥಾನ ಜಿಂದಾಬಾದ್ ಹೇಳುವವರು ಇದ್ದಾರೆ. ಅವರಿಗೆ ಕುಮ್ಮಕ್ಕು ಕೊಡುವವರು ಇದ್ದಾರೆ, ಕಾಂಗ್ರೆಸ್ ಅವರಿಗೆ ಬೆಂಬಲ ಕೊಡ್ತಾ ಇದೆ ಎಂದು ಆರೋಪಿಸಿದ್ದಾರೆ.