ಉಡುಪಿಯಲ್ಲಿ ತುಂಬಿ ತುಳುಕುವ ಸಂಭ್ರಮ-ಹರಿದು ಬಂದ ಜನಸಾಗರ
ಉಡುಪಿ : ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಬಹಳ ಸಂಭ್ರಮದಿಂದ ಜರುಗಿದ್ದು, ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಶ್ರೀಪಾದರು ರಾತ್ರಿ 11.42ರ ಮುಹೂರ್ತದಲ್ಲಿ ಅರ್ಘ್ಯ ಪ್ರದಾನ ಮಾಡಿದರು. ಅರ್ಘ್ಯ ಪ್ರದಾನದ ವೇಳೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಮಠಕ್ಕೆ ಭೇಟಿ ನೀಡಿ, ಶ್ರೀ ಕೃಷ್ಣನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಜೊತೆಗಿದ್ದರು.
ಕೃಷ್ಣ ದೇವರಗುಡಿಯಲ್ಲಿ ಮತ್ತು ಗುಡಿಯ ಎದುರಿನ ತುಳಸಿ ಕಟ್ಟೆಯಲ್ಲಿ ಅರ್ಘ್ಯ ಪ್ರಧಾನದ ವಿಧಿ ವಿಧಾನಗಳು ನಡೆದವು. ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥರ ಶ್ರೀಪಾದರು, ಶಿರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಶ್ರೀಪಾದರು ಅರ್ಘ್ಯ ಪ್ರದಾನ ಮಾಡಿದ ಬಳಿಕ ಹಗಲಿಡಿ ಉಪವಾಸವಿದ್ದ ನೂರಾರು ಭಕ್ತರು ಕೂಡ ಅರ್ಘ್ಯ ಪ್ರದಾನ ನಡೆಸಿದರು. ಶಂಖದ ಮೂಲಕ ಹಾಲು ಹಾಗೂ ನೀರಿನ ಆರ್ಘ್ಯ ಪ್ರದಾನ ಮಾಡಲಾಯಿತು.
ಇಂದು ಶ್ರೀ ಕೃಷ್ಣ ಲೀಲೋತ್ಸವದ ಪ್ರಯುಕ್ತ ವಿಟ್ಲಪಿಂಡಿ ಆಚರಣೆ ನಡೆಯಲಿದ್ದು, ಸಾವಿರಾರು ಜನರು ಕೃಷ್ಣ ಲೀಲೆಯ ವಿನೋದ ಉತ್ಸವಗಳಲ್ಲಿ ಮಿಂದೆದ್ದು ಪುಳಕಿತರಗಾಲು ಕಾತರದಿಂದ ಇದ್ದಾರೆ. ಬೆಳಗ್ಗಿನಿಂದಲೇ ಸಾವಿರಾರು ಜನರಿಗೆ ಭೋಜನ ಪ್ರಸಾದ ವಿತರಣೆ ಕೂಡಾ ನಡೆಯಲಿದ್ದು, ಆರ್ಘ್ಯ ಪ್ರದಾನದ ವೇಳೆ ದೇವರಿಗೆ ಸಮರ್ಪಿಸಿದ ಉಂಡೆ ಚಕ್ಕುಲಿಯನ್ನು ಭಕ್ತರಿಗೆ ವಿತರಣೆ ಮಾಡಲಾಗುವುದು.
ನಿನ್ನೆಯಿಂದಲೇ ಕೃಷ್ಣ ಮಠಕ್ಕೆ ಮತ್ತು ಉಡುಪಿಗೆ ಜನರು ಸಾಲುಗಟ್ಟಿ ಬರುತ್ತಿದ್ದಾರೆ. ದೇವರ ದರ್ಶನಕ್ಕೆ ಮೈಲುದ್ದದ ಸರತಿ ಸಾಲು ಇದೆ. ರಥಬೀದಿಯಲ್ಲಿ ಹೂವು ಮತ್ತಿತರ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.