ಹೆಬ್ರಿ ಕಸಾಪ ನಿವೃತ್ತ ಶಿಕ್ಷಕರೆಡೆಗೆ ಸಾಹಿತ್ಯದ ನಡಿಗೆ ಗುರು ಗೌರವಾರ್ಪಣಾ ಕಾರ್ಯಕ್ರಮ
ಹೆಬ್ರಿ : ವಿದ್ಯಾರ್ಥಿಗಳ ಪ್ರೀತಿಗಿಂತ ದೊಡ್ಡ ಆಸ್ತಿ ಬೇರಾವುದೂ ಇಲ್ಲ. ಬದುಕಿನ ಪ್ರತಿಯೊಂದು ಘಟನೆ ಜೀವನ ಪಾಠವಾಗಬೇಕು. ಕಾಯಕವೇ ಕೈಲಾಸವೆಂದು ನಂಬಿ ವೃತ್ತಿಜೀವನದಲ್ಲಿ ಮಾಡಿದ ಪ್ರಾಮಾಣಿಕ ಸೇವೆಯೇ ಬದುಕಿನ ಸವಿ ನೆನಪುಗಳು ಎಂದು ನಿವೃತ್ತ ಶಿಕ್ಷಕ ಎಸ್.ರಾಜು ಸೇರಿಗಾರ್ ಹೇಳಿದರು.
ಶಿಕ್ಷಕ ದಿನಾಚರಣೆಯ ಮುನ್ನಾ ದಿನ ಶಿವಾನಿ ಬಾಯರ್ಬೆಟ್ಟು, ಕನ್ಯಾನ ಹೆಬ್ರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ನಿವೃತ್ತ ಶಿಕ್ಷಕರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಗುರು ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದರು.
ಸೀತಾನದಿ ವಿಠಲ ಶೆಟ್ಟಿಯವರು ಮಾತನಾಡಿ, ರಾಜು ಸೇರಿಗಾರ್ ತಿಂಗಳೆ ಶಾಲೆಯ ಸಾಧನೆಗಳ ಬಗ್ಗೆ ತಿಳಿಸಿದರು. ಅವರ ಪ್ರಾಮಾಣಿಕ ಸೇವೆಯನ್ನು ಈ ಜಗತ್ತು ಮರೆಯಲು ಸಾಧ್ಯವಿಲ್ಲ. ನಿವೃತ್ತ ಶಿಕ್ಷಕರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದ ಮೂಲಕ ಈ ರೀತಿ ಸರಳ ಸಜ್ಜನಿಕೆಯ ಹಿರಿಯ ನಿವೃತ್ತ ಅಧ್ಯಾಪಕರನ್ನು ಗೌರವಿಸುವ ಕಾರ್ಯ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು
ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲ್ಲೂಕು ಇದರ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ, ನಿವೃತ್ತ ಅಧ್ಯಾಪಕ ನಾರಾಯಣ ಅಡಿಗ, ಶಿವಪುರ ಗ್ರಾ.ಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ಉಪಾಧ್ಯಕ್ಷ ಶಂಕರ ಬಡ್ಕಿಲ್ಲಾಯ, ಹೆಬ್ರಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ ಪೂಜಾರಿ, ಹೆಬ್ರಿ ಜೇಸಿಐ ಅಧ್ಯಕ್ಷ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.
ಕ.ಸಾ.ಪ ಗೌರವ ಕಾರ್ಯದರ್ಶಿ ಪ್ರವೀಣ ಕುಮಾರ್ ಸ್ವಾಗತಿಸಿ, ಪದಾಧಿಕಾರಿ ಬಾಲಚಂದ್ರ ಹೆಬ್ಬಾರ್ ವಂದಿಸಿದರು. ಕ.ಸಾ.ಪ ಹೆಬ್ರಿ ಘಟಕದ ಗೌರವ ಕಾರ್ಯದರ್ಶಿ ಮಂಜುನಾಥ್ ಕುಲಾಲ್ ಶಿವಪುರ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳಾದ ವಿದ್ಯಾ ಜನಾರ್ದನ್ ಪ್ರಾರ್ಥಿಸಿ, ಸನ್ಮಾನ ಪತ್ರವನ್ನು ವೀಣಾ ಆರ್. ಭಟ್ ವಾಚಿಸಿದರು. ರಾಜೀವ ಸೇರಿಗಾರ್ ಅವರ ಅಭಿಮಾನಿಗಳು, ಕ.ಸಾ.ಪ ಹೆಬ್ರಿ ತಾಲೂಕು ಕಾರ್ಯಕಾರಿ ಮಂಡಳಿ ಸದಸ್ಯರು, ಭಾಗವಹಿಸಿದ್ದರು.