ಮರಣದ ದವಡೆಯಲ್ಲೂ ವಿಷಾದಿಸದೆ ನಡೆದ

ದೇವರೇ ಹೀಗೇಕೆ ಮಾಡಿದೆ ಎಂದು ನಾನು ಕೇಳುವುದಿಲ್ಲ ಎಂದಿದ್ದರು ಟೆನ್ನಿಸ್ ಆಟಗಾರ ಆರ್ಥರ್ ಆಶ್

ಅಮೆರಿಕದ ಈ ಲೆಜೆಂಡರಿ ದೈತ್ಯ ಟೆನ್ನಿಸ್ ಆಟಗಾರನ ರೋಮಾಂಚನ ಉಂಟುಮಾಡುವ ಬದುಕಿನ ಹೋರಾಟದ ಕತೆಯನ್ನು ನನ್ನ ತರಬೇತಿಯ ಸಂದರ್ಭ ನೂರಾರು ಬಾರಿ ಹೇಳಿದ್ದೇನೆ. ಈಗ ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ.

ಆತನ ಹೆಸರು ಆರ್ಥರ್ ಆಶ್

ಆತ ಒಬ್ಬ ಕರಿಯ ಟೆನ್ನಿಸ್ ಆಟಗಾರ. ತುಳಿತಕ್ಕೆ ಒಳಗಾದ ಸಮುದಾಯದಿಂದ ಎದ್ದು ಬಂದವನು. ಅಮೆರಿಕದ ಡೇವಿಸ್ ಕಪ್ ತಂಡಕ್ಕೆ ಆಯ್ಕೆ ಆದ ಮೊದಲ ಬ್ಲಾಕ್ ಟೆನ್ನಿಸ್ ಆಟಗಾರ ಆತ. ತನ್ನ ವಿಸ್ತಾರವಾದ ಟೆನ್ನಿಸ್ ಜೀವನದಲ್ಲಿ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಈ ಮೂರೂ ಗ್ರಾನಸ್ಲಾಮ್ ಪ್ರಶಸ್ತಿಗಳನ್ನು ಗೆದ್ದವನು. ಅವನ ಟೆನ್ನಿಸ್ ಸಾಧನೆ ಜಗತ್ತಿನ ಗಮನ ಸೆಳೆದದ್ದು, ಆತನಿಗೆ ಲಕ್ಷ ಲಕ್ಷ ಪ್ರೀತಿ ಮಾಡುವ ಅಭಿಮಾನಿಗಳು ದೊರೆತದ್ದು ಎಲ್ಲವೂ ಉಲ್ಲೇಖನೀಯ. ಆತ ಬದುಕಿದ್ದಾಗ ಟೆನ್ನಿಸ್ ಲೆಜೆಂಡ್ ಎಂದು ಕರೆಸಿಕೊಂಡಿದ್ದ.

ಅಂತಿಮ ದಿನಗಳು ಅತ್ಯಂತ ದಾರುಣ ಆಗಿದ್ದವು

ಆದರೆ ಅವನ ಜೀವನದ ಕೊನೆಯ 14 ವರ್ಷಗಳು ಅತ್ಯಂತ ದುಃಖದಾಯಕ ಆಗಿದ್ದವು. ಅವನು ಎರಡು ಬಾರಿ ಅತ್ಯಂತ ಸಂಕೀರ್ಣವಾದ ಬೈಪಾಸ್ ಸರ್ಜರಿಗೆ ಒಳಗಾದನು. ಮುಂದೆ ಅಷ್ಟೇ ಸಂಕೀರ್ಣವಾದ ಮೆದುಳಿನ ಸರ್ಜರಿ ನಡೆಯಿತು. ಆತನ ದೇಹದ ಅರ್ಧದಷ್ಟು ಭಾಗವು ಪಾರಾಲೈಸ್ ಆಯಿತು. ಕೊನೆಗೆ ಆಗಿನ ಕಾಲಕ್ಕೆ ಅತ್ಯಂತ ಹೆಚ್ಚು ಅಪಾಯಕಾರಿ ಆಗಿದ್ದ ಏಡ್ಸ್ ಕಾಯಿಲೆ ಆತನಿಗೆ ಅಮರಿತು. ಇದರಿಂದ ಆರ್ಥರ್ ಆಶ್ ಪಡಬಾರದ ಪಾಡುಪಟ್ಟನು. ಆಸ್ಪತ್ರೆಯಲ್ಲಿ ರಕ್ತಪೂರಣ ಮಾಡುವಾಗ ಅವನಿಗೆ AIDS ಸೋಂಕು ತಗುಲಿತ್ತು. ಆಗ ನಿಜವಾದ ಸಾವು ಬದುಕಿನ ದೀರ್ಘ ಹೋರಾಟದ ಹದಿನಾಲ್ಕು ವರ್ಷಗಳನ್ನು ಅವನು ದಾಟಬೇಕಾಯಿತು.

ಒಬ್ಬ ಅಭಿಮಾನಿ ಬರೆದ ಪತ್ರ

ಆಗ ಒಬ್ಬ ಅಭಿಮಾನಿ ತುಂಬಾ ಪ್ರೀತಿಯಿಂದ ಅವನಿಗೆ ಒಂದು ಪತ್ರ ಬರೆದಿದ್ದ. ಅದರ ಒಟ್ಟು ಸಾರಾಂಶ ಹೀಗೆ ಇತ್ತು-ಅರ್ಥರ್, ಇಷ್ಟೊಂದು ಸಮಸ್ಯೆಗಳು ಬಂದಾಗಲೂ ದೇವರೇ, ನೀನು ಹೀಗೇಕೆ ಮಾಡಿದೆ ಎಂದು ಯಾಕೆ ಕೇಳುವುದಿಲ್ಲ? ನಿನಗೇಕೆ ವಿಷಾದ ಇಲ್ಲ?
ಅದಕ್ಕೆ ಆರ್ಥರ್ ಕೊಟ್ಟ ಉತ್ತರವು ಹೆಚ್ಚು ಮಾರ್ಮಿಕ ಆಗಿತ್ತು.

ನಾನೇಕೆ ವಿಷಾದ ಪಡಲಿ ಎಂದು ಬಿಟ್ಟ ಆರ್ಥರ್

“ಗೆಳೆಯಾ, ನಿನ್ನ ಕಳಕಳಿಗೆ ಥ್ಯಾಂಕ್ಸ್ ಹೇಳುವೆ. ಆದರೆ ಯೋಚನೆ ಮಾಡು. ನಾನು ಟೆನ್ನಿಸ್ ಆಟ ಆಡಲು ಮೊದಲ ಬಾರಿಗೆ ಕೋರ್ಟಿಗೆ ಇಳಿದಾಗ ಜಗತ್ತಿನಲ್ಲಿ ಐದು ಕೋಟಿ ಜನ ಟೆನ್ನಿಸ್ ಆಡ್ತಾ ಇದ್ದರು. ಅದರಲ್ಲಿ 50 ಲಕ್ಷ ಮಂದಿ ಜಿಲ್ಲಾ ಮಟ್ಟವನ್ನು ದಾಟಿರಬಹುದು. ಅವರಲ್ಲಿ ಐದು ಲಕ್ಷ ಮಂದಿ ಮಾತ್ರ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರಬಹುದು. ಕೇವಲ ಐವತ್ತು ಸಾವಿರ ಮಂದಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಅವಕಾಶವನ್ನು ಪಡೆದಿರಬಹುದು. ಕೇವಲ ಐದು ಸಾವಿರ ಮಂದಿಗೆ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶವು ದೊರೆತಿರುವ ಸಾಧ್ಯತೆ ಇರಬಹುದು. ಅದರಲ್ಲಿ ಐನೂರು ಮಂದಿ ಮಾತ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿರಬಹುದು.
ಅವರಲ್ಲಿ ಕೇವಲ ಐವತ್ತು ಮಂದಿ ವಿಂಬಲ್ಡನ್ ಕೂಟದ ಮೊದಲ ಸುತ್ತನ್ನು ತಲುಪಿರುವ ಸಾಧ್ಯತೆ ಇದೆ. ಎಂಟು ಮಂದಿ ಮಾತ್ರ ಕ್ವಾರ್ಟರ್ ಫೈನಲ್ ತಲುಪಿರುವ ಸಾಧ್ಯತೆ ಇದೆ. ನಾಲ್ಕು ಮಂದಿ ಮಾತ್ರ ಸೆಮಿಫೈನಲ್ ಆಡುವ ಭಾಗ್ಯ ಪಡೆದಿರುತ್ತಾರೆ.
ಕೇವಲ ಇಬ್ಬರು ಮಾತ್ರ ವಿಂಬಲ್ಡನ್ ಫೈನಲ್ ಸುತ್ತು ತಲುಪುತ್ತಾರೆ. ಗಾಡ್ಸ್ ಗ್ರೇಸ್! ಆ ಇಬ್ಬರಲ್ಲಿ ನಾನೂ ಒಬ್ಬನಾಗಿದ್ದೆ. ಜಗತ್ತಿನ ಕೇವಲ ಇಬ್ಬರು ಶ್ರೇಷ್ಠವಾದ ಟೆನ್ನಿಸ್ ಆಟಗಾರರು ಪಡೆಯುವ ವಿರಳ ಅವಕಾಶ ಅಂದು ನನಗೆ ದೊರಕಿತ್ತು. ನಾನು ಜಗತ್ತಿನ ಕೇವಲ ನಂಬರ್ ಟೂ ಆಟಗಾರನಾಗಿ ಬೆಳ್ಳಿಯ ಹೊಳೆಯುವ ಟ್ರೋಫಿ ಎತ್ತಿ ಹಿಡಿದು ಭಾರೀ ಖುಷಿ ಪಟ್ಟಿದ್ದೆ. ಆಗ ಅಯ್ಯೋ ದೇವರೇ, ನೀನು ಯಾಕೆ ಹೀಗೆ ಮಾಡಿದೆ ಎಂದು ನಾನು ಕೇಳಲಿಲ್ಲ. ನನ್ನ ಜೀವನದ ಸಂತೋಷದ ಪರಾಕಾಷ್ಠೆಯ ಕ್ಷಣಗಳಲ್ಲಿ ನಾನು ದೇವರನ್ನು ಪ್ರಶ್ನೆ ಮಾಡಲಿಲ್ಲ. ಈಗ ನನಗೆ ತೀವ್ರ ಆರೋಗ್ಯದ ಸಮಸ್ಯೆಗಳು ಎದುರಾದಾಗ ಹೇಗೆ ದೇವರನ್ನು ಕೇಳಲಿ?”
ಸ್ನೇಹಿತರೇ, ನಮಗೆ ದೇವರು ದೊಡ್ಡ ಹೆಸರು, ಕೀರ್ತಿ, ಹತ್ತಾರು ಪ್ರಶಸ್ತಿ, ಎತ್ತರದ ಪದವಿ, ಅಧಿಕಾರ, ರಾಶಿ ದುಡ್ಡು, ಭಾರಿ ಪ್ರಭಾವ, ತುಂಬಾ ಹ್ಯಾಪಿನೆಸ್ ಕೊಟ್ಟಾಗ ನಾವು ದೇವರೇ, ಹೀಗೇಕೆ ಮಾಡಿರುವೆ ಎಂದು ಗಟ್ಟಿಯಾಗಿ ಕೇಳಿದ್ದು ಇದೆಯಾ? ಹಾಗಿರುವಾಗ ಸಮಸ್ಯೆಗಳು ಬಂದಾಗ, ಆರೋಗ್ಯ ಹಾಳಾದಾಗ, ಹಣಕಾಸು ನಷ್ಟ ಆದಾಗ ಯಾಕೆ ದೇವರನ್ನು ಪ್ರಶ್ನೆ ಮಾಡಬೇಕು?
ಅಂದ ಹಾಗೆ 1993ರಲ್ಲಿ ತನ್ನ ಐವತ್ತನೇ ವರ್ಷದಲ್ಲಿ ಆರ್ಥರ್ ಆಶ್ ತನ್ನ ಬದುಕಿಗೆ ಕೊನೆಯ ಚುಕ್ಕೆ ಇಟ್ಟನು.
ಟೆನ್ನಿಸ್ ಲೆಜೆಂಡ್ ಆರ್ಥರ್ ಆಶ್ ಹೇಳಿದ್ದು ನಿಜ ಎಂದು ನಿಮಗೆ ಅನ್ನಿಸುತ್ತಿದೆಯಾ?
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.





























































































































































































































error: Content is protected !!
Scroll to Top