ಮೂಡುಬಿದಿರೆ: ಧೂಳು ಬರುವ ಹಾಗೆ ವೇಗವಾಗಿ ವಾಹನವನ್ನು ಚಲಾಯಿಸಬೇಡ ನಿಧಾನವಾಗಿ ಹೋಗೆಂದು ಬುದ್ಧಿವಾದ ಹೇಳಿದಕ್ಕೆ ಚಾಲಕ ರಾಡ್ನಿಂದ ಹೊಡೆದು, ಟಿಪ್ಪರ್ ಹತ್ತಿಸಿ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಮೂಡುಬಿದಿರೆಯ ಕೋಟೆಬಾಗಿಲಿನಲ್ಲಿ ಸಂಭವಿಸಿದೆ.ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಹತ್ಯೆಗೀಡಾದ ವ್ಯಕ್ತಿ.
ಫಯಾಝ್ ಶುಕ್ರವಾರ ಕೋಟೆಬಾಗಿಲು ಮಸೀದಿಗೆ ನಮಾಝ್ಗೆ ತೆರಳುವ ಸಂಧರ್ಭ ಕೋಟೆಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಆರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು ಹೋಗಿದ್ದು ಆಗ ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಫಯಾಝ್ ಅವರ ಮೇಲೆ ಧೂಳನ್ನು ಹಾರಿಸಿದ್ದಾನೆ. ಕೋಪಗೊಂಡ ಫಯಾಝ್ ಅವರು ನಿಧಾನ ಹೋಗುವಂತೆ ಹೇಳಿದ್ದು ಈ ಸಂದರ್ಭ ಇಬ್ಬರ ಮದ್ಯೆ ಮಾತಿನ ಚಕಮಕಿ ನಡೆದಿದೆ. ನಮಾಝ್ ಮುಗಿಸಿಕೊಂಡು ಹಿಂತಿರುವ ಸಂದರ್ಭದಲ್ಲಿಯೂ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು ಈ ಸಂಧರ್ಭ ಫಯಾಝ್ ಅವರು ಟಿಪ್ಪರ್ನ ಸ್ಟೆಫ್ ಮೇಲೆ ಹೋಗಿ ಮಾತನಾಡಿದ್ದು ಆಗ ಆರೀಸ್ ಮಾರಾಕಾಸ್ತ್ರದಿಂದ ತಲೆ ಭಾಗಕ್ಕೆ ಹೊಡೆದು ಟಿಪ್ಪರನ್ನು ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸಿದ್ದು ಆಗ ಆಯತಪ್ಪಿ ಫಯಾಝ್ ಅವರು ರಸ್ತೆಗೆ ಬಿದ್ದಿದ್ದಾರೆ. ಬಿದ್ದ ಅವರ ಮೇಲೇಯೇ ಟಿಪ್ಪರನ್ನು ಹಾಯಿಸಿದ್ದಾನೆ.
ರಾಡ್ನ ಏಟು ಮತ್ತು ಟಿಪ್ಪರ್ನ ಅಡಿಗೆ ಬಿದ್ದ ಫಯಾಝ್ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟರೆನ್ನಲಾಗಿದೆ. ಟಿಪ್ಪರ್ ಚಾಲಕ ಆರೀಸ್ ಟಿಪ್ಪರನ್ನು ಅರ್ಧ ದಾರಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಚಾಲಕನ ಪತ್ತೆಗಾಗಿ ಮೂಡುಬಿದಿರೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.