1 ಲಕ್ಷ ಜನ ಸೇರುವ ನಿರೀಕ್ಷೆ
ಮಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.11ರಂದು ಪುತ್ತೂರಿಗೆ ಭೇಟಿ ನೀಡಲಿದ್ದಾರೆ. ಶಾ ಭೇಟಿ ಈಗಾಗಲೇ ದಕ್ಷಿಣ ಕನ್ನಡದಲ್ಲಿ ಸಂಚಲನ ಸೃಷ್ಟಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಟೆ ವಿಕ್ರಮ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ.
ಪುತ್ತೂರಿನಲ್ಲಿ ಅಮಿತ್ ಶಾ ಕ್ಯಾಂಪ್ಕೊ ಸಂಸ್ಥೆಯ ಸುವರ್ಣ ವರ್ಷಾಚರಣೆಗೆ ಚಾಲನೆ ನೀಡಲಿದ್ದಾರೆ. ಬಳಿಕ ತೆಂಕಿಲದ ವಿವೇಕಾನಂದ ಶಾಲಾ ಮೈದಾನದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ವೇದಿಕೆ, ಆಗಮನ, ನಿರ್ಗಮನ ಹೇಗಿರಬೇಕೆಂದು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಿವೇಕಾನಂದ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಎರಡು ದಿನ ರಜೆ ನೀಡುವ ಬಗ್ಗೆ ಚರ್ಚೆಯಾಗಿದೆ. ವೇದಿಕೆ ನಿರ್ಮಾಣ ಕಾಮಗಾರಿಗೆ ನೆಲದ ಸಮತಟ್ಟು ಕಾರ್ಯ ನಡೆಯುತ್ತಿದ್ದು, ಕ್ರಿಮಿನಲ್ ಹಿನ್ನಲೆಯುಳ್ಳ ಕೆಲಸಗಾರರನ್ನು ಬಳಸದಂತೆ ವೇದಿಕೆ ಕಾಮಗಾರಿ ವಹಿಸಿಕೊಂಡ ಕಾಂಟ್ರಾಕ್ಟರ್ಗೆ ಎಸ್ಪಿ ಸೂಚನೆ ನೀಡಿದ್ದಾರೆ.
ಸುಮಾರು 4 ಹೆಕ್ಟೇರ್ ವ್ಯಾಪ್ತಿಯ ಶಾಲಾ ಮೈದಾನವನ್ನು ಅಮಿತ್ ಶಾ ಸಭಾವೇದಿಕೆಯಾಗಿ ಸಿದ್ಧಗೊಳಿಸಲಗುತ್ತದೆ. ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅಮಿತ್ ಶಾ ಕೇರಳದ ಕಣ್ಣೂರಿನಿಂದ ಮಂಗಳೂರಿಗೆ ಬರಲಿದ್ದು, ಬಳಿಕ ಸೇನಾ ಹೆಲಿಕಾಪ್ಟರ್ ಮೂಲಕ ಪುತ್ತೂರು ಫಿಲೋಮಿನಾ ಕಾಲೇಜು ಮೈದಾನದಲ್ಲಿ ಲ್ಯಾಂಡ್ ಆಗಲಿದ್ದಾರೆ. ತೆಂಕಿಲದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಭಾಗಗಳಿಂದ ಕಾರ್ಯಕರ್ತರು ಬರುವ ನಿರೀಕ್ಷೆಗಳಿವೆ. ಕಾರ್ಯಕರ್ತರ ಜತೆಗೆ ರೈತರು, ಸಹಕಾರಿಗಳು ಭಾಗವಹಿಸಲಿದ್ದಾರೆ. ಪುತ್ತೂರಿನ ಈ ಕಾರ್ಯಕ್ರಮವನ್ನು ಚಾರಿತ್ರಿಕಗೊಳಿಸಲು ಬಿಜೆಪಿ ನಾಯಕರು ಎಲ್ಲಾ ಕ್ರಮವನ್ನು ಕೈಗೊಂಡಿದ್ದಾರೆ.