ಇನ್ನೂ ಪ್ರಕಟವಾಗದ ಮಾರ್ಗಸೂಚಿ; ಕಠಿಣ ಪ್ರಕ್ರಿಯೆಯಿಂದ ತೊಡಕು
ಮಂಗಳೂರು: ‘ಕಾಂತಾರ’ ಸಿನೆಮಾದಿಂದ ಪ್ರೇರಣೆ ಪಡೆದು ರಾಜ್ಯ ಸರ್ಕಾರ ಘೋಷಿಸಿದ ದೈವ ನರ್ತಕರಿಗೆ ಮಾಸಾಶನ ಕೊಡುವ ಕುರಿತು ಇನ್ನೂ ಮಾರ್ಗಸೂಚಿ ಬಿಡುಗಡೆಯಾಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅಕ್ಟೋಬರ್ನಲ್ಲಿ 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಅದಾಗಿ ಎರಡು ತಿಂಗಳು ಕಳೆದಿದ್ದರೂ, ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿ ಇನ್ನೂ ಹೊರಬಂದಿಲ್ಲ. ಸರಿಯಾದ ಮಾಹಿತಿ ಲಭ್ಯವಾಗದ ಕಾರಣ ಫಲಾನುಭವಿಗಳ ವಿವರ ಸಂಗ್ರಹಿಸುವುದು ಕಷ್ಟಕರವಾಗಿದೆ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು.
ದೈವ ನರ್ತಕರನ್ನು ಜಾನಪದ ಕಲಾವಿದರ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ಅವರ ಬಗ್ಗೆ ಪ್ರತ್ಯೇಕ ಸಮೀಕ್ಷೆ ನಡೆದಿಲ್ಲ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರ್ಕಾರ ಸರಳಗೊಳಿಸಬೇಕಾಗಿದ್ದು, ಈ ಕಾರಣದಿಂದಾಗಿ ದಕ್ಷಿಣ ಕನ್ನಡದ ಇಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ದೈವಾರಾಧನೆ ನಿರೂಪಕ ದಯಾನಂದ ಜಿ. ಕತ್ತಲ್ಸರ್ ಈ ಕುರಿತು ಮಾತನಾಡಿ, ಕರಾವಳಿಯಲ್ಲಿ 60 ವರ್ಷ ದಾಟಿದ ಕೇವಲ 1 ಸಾವಿರ ಮಂದಿ ಮಾತ್ರ ದೈವಾರಾಧನೆ ನಡೆಸುತ್ತಿದ್ದು, ಗೌರವ ಧನವು ನಿರ್ಗತಿಕರಿಗೆ ಪ್ರಯೋಜನವಾಗಬೇಕಾದರೆ ವಯೋಮಿತಿಯನ್ನು ಕನಿಷ್ಠ 55ಕ್ಕೆ ಇಳಿಸಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಅನೇಕ ಕಲಾವಿದರು ವೃದ್ಧಾಪ್ಯ ವೇತನ (ಸಂಧ್ಯಾ ಸುರಕ್ಷಾ) ಪಡೆಯುತ್ತಿದ್ದು, ಈ ಹೊಸ ಮಾಸಿಕ ಗೌರವಧನಕ್ಕೆ ಅರ್ಜಿ ಸಲ್ಲಿಸುವಂತಿಲ್ಲ. ಅವರು ಇದನ್ನು ಪಡೆಯಬೇಕಾದರೆ, ತಮ್ಮ ಸದ್ಯದ ಪಿಂಚಣಿಯನ್ನು ರದ್ದುಗೊಳಿಸಬೇಕಾಗುತ್ತದೆ. ಆದರೆ, ಹಳೆಯ ಪಿಂಚಣಿ ರದ್ದುಪಡಿಸಿ ಹೊಸ ಯೋಜನೆಗೆ ಅರ್ಜಿ ಸಲ್ಲಿಸುವ ಈ ಪ್ರಕ್ರಿಯೆ ಜಟಿಲವಾಗಿದೆ. ಎಲ್ಲಾ ಅರ್ಜಿದಾರರಿಗೆ ಮಾಸಿಕ ಗೌರವಧನ ನೀಡಲು ಬಜೆಟ್ ಕೊರತೆ ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹೆಚ್ಚಿನ ಜನರು ಅನಕ್ಷರಸ್ಥರು ಮತ್ತು ಬಡವರಾಗಿದ್ದು, ಯೋಜನೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಸುಲಭವಲ್ಲ. ಆದ್ದರಿಂದ, ಮಾಸಿಕ ಗೌರವಧನಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪಂಚಾಯತ್ ಅಥವಾ ಪಿಡಿಒ ಮಟ್ಟದಲ್ಲಿ ಮಾಡಬೇಕು. ಸಮಸ್ಯೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರ ಗಮನಕ್ಕೆ ತಂದಿದ್ದು, ಅವರು ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ದೈವ ನರ್ತಕರ ಬಗ್ಗೆ ನಿರ್ದಿಷ್ಟ ಮಾಹಿತಿ ಲಭ್ಯವಿದೆ ಮತ್ತು ಅವರು ಇನ್ನೂ ಸರ್ಕಾರದಿಂದ ಮಾರ್ಗಸೂಚಿಗಳಿಗಾಗಿ ಕಾಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.