ಕಾರ್ಕಳ : ಕಾರ್ಕಳ ತಾಲೂಕು ಪಂಚಾಯತ್ ನ ನೂತನ ಕಟ್ಟಡವನ್ನು ಸಚಿವ ವಿ. ಸುನೀಲ್ ಕುಮಾರ್ ಶನಿವಾರ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಸಚಿವರು, ಕಾರ್ಕಳದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಸರಕಾರಿ ಕಚೇರಿಗಳು ಸುಸಜ್ಜಿತವಾದಾಗ ಕೆಲಸ ಕಾರ್ಯಗಳು ಸುಸೂತ್ರವಾಗಿ ನೆರವೇರುವುದು. ಈ ನಿಟ್ಟಿನಲ್ಲಿ ಸರಕಾರಿ ಕಚೇರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಉಡುಪಿ ಜಿ.ಪಂ. ಸಿಇಒ ಎಚ್. ಪ್ರಸನ್ನ ಮಾತನಾಡಿ, ಕಾರ್ಕಳ ಒಂದು ಮಾಡೆಲ್ ಕ್ಷೇತ್ರ. ಇದೀಗ 1.64 ಕೋಟಿ ರೂ. ವೆಚ್ಚದಲ್ಲಿ ತಾ.ಪಂ. ಕಟ್ಟಡ ನಿರ್ಮಾಣವಾಗಿದೆ. ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಕಾರ್ಕಳದಲ್ಲಿ ಮೂಲಭೂತ ಸೌಕರ್ಯಗಳಿಗೆ ಯಾವೊಂದು ಕೊರತೆಯಿಲ್ಲ. ಪ್ರಾಮಾಣಿಕವಾಗಿ ಜನರಿಗೆ ಸೇವೆ ನೀಡುವುದಷ್ಟೇ ಸರಕಾರಿ ಅಧಿಕಾರಿ, ಸಿಬ್ಬಂದಿ ಜವಾಬ್ದಾರಿಯಾಗಿದೆ ಎಂದರು.
ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ತಹಶೀಲ್ದಾರ್ ಕೆ. ಪುರಂದರ, ಹೆಬ್ರಿ ಇಒ ಶಶಿಧರ್, ಪುರಸಭೆ ಮುಖ್ಯಾಧಿಕಾರಿ ರೂಪ ಶೆಟ್ಟಿ, ಕುಕ್ಕುಂದೂರು ಪಂಚಾಯತ್ ಅಧ್ಯಕ್ಷೆ ಶಶಿಮಣಿ ಸಂಪತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಕಳ ತಾ.ಪಂ. ಇಒ ಗುರುದತ್ ಸ್ವಾಗತಿಸಿ, ತಾ.ಪಂ. ಆಡಳಿತಾಧಿಕಾರಿ ಪ್ರತಿಭಾ ಆರ್. ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷಕ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು.