ವಸತಿ ಬಡಾವಣೆ ನಡುವೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಶೆಡ್
ಮಂಗಳೂರು : ಸುರತ್ಕಲ್ ಸಮೀಪ ಕಟ್ಲ ಕ್ರಾಸ್ ಎಂಬಲ್ಲಿ ಗುಜರಿ ಗೋದಾಮೊಂದು ಇಂದು ಬೆಳಗ್ಗೆ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಸುಟ್ಟು ಹೋಗಿದೆ.
ಬಡಾವಣೆಯ ನಡುವೆ ಖಾಸಗಿ ಜಾಗದಲ್ಲಿ ಕೆಮಿಕಲ್ ಡ್ರಮ್ ಹಾಗೂ ಇನ್ನಿತರ ಗುಜರಿ ವಸ್ತುಗಳನ್ನು ರಾಶಿ ಹಾಕಿ ಗೋದಾಮು ರೀತಿ ಮಾಡಿಕೊಂಡಿದ್ದರು. ಸುತ್ತ ಮನೆಗಳಿದ್ದು, ಇಲ್ಲಿ ಗುಜರಿ ಗೋದಾಮು ಮಾಡಿರುವುದಕ್ಕೆ ಪರಿಸರದವರು ಆಕ್ಷೇಪ ವ್ಯಕ್ತಪಡಿಸಿ ನಗರಪಾಲಿಕೆಗೂ ದೂರು ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.
ಇಂದು ಬೆಳಗ್ಗೆ ಬೆಂಕಿ ಹತ್ತಿಕೊಂಡಾಗ ಜನರಲ್ಲಿ ಆತಂಕ ಮೂಡಿತ್ತು. ಪರಿಸರದ ಜನರೇ ಬಂದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಸುತ್ತಲಿರುವ ಮನೆಗಳ ಒಳಗೂ ಹೊಗೆ, ವಾಸನೆ ತುಂಬಿ ಜನರಿಗೆ ಸಂಕಷ್ಟವಾಗಿದೆ. ಗೋದಾಮಿನಿಂದಾಗಿ ಪರಿಸರದಲ್ಲಿ ವಾಸನೆ ಹರಡುತ್ತಿತ್ತು ಮತ್ತು ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿತ್ತು ಎಂದು ಸ್ಥಳೀಯ ಜನರು ಆರೋಪಿಸಿದ್ದಾರೆ.