ಹಾಲಿನ ಖರೀದಿ ದರ 10 ರೂ. ಏರಿಸಲು ಆಗ್ರಹಿಸಿ ಪತ್ರ ಚಳವಳಿ
ಕಾರ್ಕಳ: ಸಹಕಾರ ಭಾರತಿ , ಉಡುಪಿ ಜಿಲ್ಲೆ ಮತ್ತು ಭಾರತೀಯ ಕಿಸಾನ್ ಸಂಘ ಇವರ ಸಹಯೋಗದೊಂದಿಗೆ
ಹಾಲಿನ ಖರೀದಿ ದರ ಏರಿಸುವಂತೆ ಒತ್ತಾಯಿಸಿ ಬೃಹತ್ ರೈತ ಸಮಾವೇಶ ಅ.27ರಂದು ಉಡುಪಿ ಶ್ರೀ ಕೃಷ್ಣ ಮಠ ರಾಜಾಂಗಣ ಬೆಳಗ್ಗೆ 10ಕ್ಕೆ ಜರುಗಲಿದೆ.ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರು ಅಶೀರ್ವಚನ ನೀಡಲಿದ್ದು, ಅಧ್ಯಕ್ಷತೆಯನ್ನು ಸಹಕಾರ ಭಾರತಿ ಉಡುಪಿ ಜಿಲ್ಲೆ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ವಹಿಸಿಕೊಳ್ಳಲಿದ್ದಾರೆ. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಸಹಕಾರ ಭಾರತಿ ರಾಜ್ಯ ಸಂಚಾಲಕ ಸಾಣೂರು ನರಸಿಂಹ ಕಾಮತ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಅಂಚೆ ಕಾರ್ಡ್ ಚಳವಳಿ
ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರಿಗೆ ಕನಿಷ್ಟ 10 ರೂಪಾಯಿ ಏರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಂಚೆ ಕಾರ್ಡ್ ಮೂಲಕ ಪತ್ರ ಬರೆಯುವ ಅಂಚೆ ಕಾರ್ಡ್ ಚಳವಳಿಯನ್ನು ಅಂದು ಪ್ರಾರಂಭಿಸಲಾಗುವುದು.