ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಎಂಬ ಸಂಸ್ಥೆಯಿಂದ ಆಕ್ಷೇಪ ಸಲ್ಲಿಕೆ
ಮಂಗಳೂರು : ಕೆಲವು ದೇವಸ್ಥಾನಗಳಲ್ಲಿ ಜಾರಿಯಲ್ಲಿರುವ ಒಳಗೆ ಪ್ರವೇಶಿಸುವಾಗ ಅಂಗಿ-ಬನಿಯನ್ ತೆಗೆದಿಡುವ ಸಂಪ್ರದಾಯಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ದೇವಸ್ಥಾನದ ವಿರುದ್ಧ ದೂರು ದಾಖಲಾಗಿದೆ.
ಅಂಗಿ-ಬನಿಯನ್ ಕಳಚಿಟ್ಟು ದೇವರ ದರ್ಶನ ಪಡೆಯುವ ಪದ್ಧತಿ ಸರಿಯಲ್ಲ ಎಂದು ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಎಂಬ ಸಂಸ್ಥೆ ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ನೀಡಿದೆ. ಸರ್ಕಾರದ ಆದೇಶ ಮತ್ತು ಹಿಂದೂ ಸಂಪ್ರದಾಯದಲ್ಲಿ ಈ ರೀತಿಯ ಪದ್ಧತಿ ಇಲ್ಲ, ಇಂತಹ ಆಚರಣೆ ಮೂಲಕ ಭಕ್ತರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ, ಚರ್ಮ ರೋಗವಿದ್ದವರು ಅಂಗಿ ಕಳಚಿ ಸಾಗುವುದರಿಂದ ಬೇರೆಯವರಿಗೆ ಹರಡುವ ಸಾಧ್ಯತೆ ಹೆಚ್ಚಿದೆ. ಅಂಗವೈಕಲ್ಯ ಇದ್ದವರಿಗೆ ಬಟ್ಟೆ ಕಳಚಿ ದರ್ಶನ ಪಡೆಯುವುದು ಮುಜುಗರ ಉಂಟುಮಾಡುತ್ತದೆ. ಇದು ಭಾರತದ ಸಾಂವಿಧಾನಿಕ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ದೇವಸ್ಥಾನದಲ್ಲಿ ಅಳವಡಿಸಲಾದ ಬಟ್ಟೆ ಕಳಚುವ ಸೂಚನಾ ಬೋರ್ಡ್ ತೆರವುಗೊಳಿಸುವಂತೆ ಒಕ್ಕೂಟ ಮನವಿ ಮಾಡಿದೆ.