ಇಂದು ಭಾರತ-ಆಸ್ಟ್ರೇಲಿಯ ದ್ವಿತೀಯ ಪಂದ್ಯ

ಮ್ಯಾಚ್‌ಗೆ ಮಳೆ ಕಾಟ ಸಾಧ್ಯತೆ

ನಾಗಪುರ : ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧದ ಬೆಟ್ಟದಷ್ಟು ರನ್‌ ಕಲೆಹಾಕಿಯೂ ಸೋತ ಭಾರತ ತಂಡ ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಂದು ನಾಗಪುರದ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ. ಆದರೆ, ಈ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗುತ್ತಿದೆ. ನಾಗಪುರದಲ್ಲಿ ಎಡೆಬಿಡದೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಗುರುವಾರ ಸತತವಾಗಿ ಮಳೆ ಬಂದ ಕಾರಣ ಭಾರತ–ಆಸ್ಟ್ರೇಲಿಯಾ ಆಟಗಾರರು ಅಭ್ಯಾಸಕ್ಕೆಂದು ಮೈದಾನಕ್ಕೆ ಇಳಿಯಲು ಸಾಧ್ಯವಾಗಲಿಲ್ಲ. ಇಂದು ಪಂದ್ಯದ ದಿನ ಕೂಡ ವರುಣನ ಕಾಟ ಇರಲಿದೆ ಎನ್ನಲಾಗುತ್ತಿದ್ದು ಸಂಜೆ ವೇಳೆಗೂ ಮಳೆ ಬರುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೊದಲ ಪಂದ್ಯದಲ್ಲಿ ಭಾರತ 208 ರನ್ ಗಳಿಸಿದರೂ ಗೆಲುವು ಕಾಣಲು ವಿಫಲವಾಯಿತು. ಬೌಲಿಂಗ್​ನಲ್ಲಿ ಸಂಪೂರ್ಣ ಕಳಪೆ ಪ್ರದರ್ಶನ ತೋರಿದ ರೋಹಿತ್ ಪಡೆ ಸೋಲು ಕಾಣಬೇಕಾಯಿತು. ಸ್ವತಃ ಟೀಮ್ ಇಂಡಿಯಾದ ಸ್ಟಾರ್ ಬೌಲರ್​ಗಳಾದ ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಹರ್ಷಲ್ ಪಟೇಲ್ ಅವರೇ ದುಬಾರಿ ಆದರು. ಟಿ20 ವಿಶ್ವಕಪ್​ಗೆ ಕೆಲವೇ ದಿನವಿರುವಾಗ ಭಾರತೀಯ ಬೌಲರ್​ಗಳ ಈ ಕಳಪೆ ಪ್ರದರ್ಶನ ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕಾಗಿ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ.
ಗಾಯದಿಂದಾಗಿ ಬಹುದಿನಗಳ ಬಳಿಕ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಯಾರ್ಕರ್ ಕಿಂಗ್ ಜಸ್​ಪ್ರೀತ್ ಬುಮ್ರಾ ಅವರನ್ನು ಎರಡನೇ ಟಿ20 ಯಲ್ಲಿ ಕಣಕ್ಕಿಳಿಸಲು ಬಿಸಿಸಿಐ ಮುಂದಾಗಿದೆ. ಶೇ. 100 ರಷ್ಟು ಫಿಟ್ ಇರದ ಕಾರಣ ಬುಮ್ರಾ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಕಣಕ್ಕಿಳಿಯಲು ತಯಾರಾಗಿರುವ ಇವರು ಉಮೇಶ್ ಯಾದವ್ ಜಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಬುಮ್ರಾ ಆಡದ ಕಳೆದ ಐದು ಪಂದ್ಯಗಳ ಪೈಕಿ ಭಾರತ ಮೂರರಲ್ಲಿ ಸೋಲು ಕಂಡಿದೆ. ಈಗ ಇವರ ಕಮ್​ಬ್ಯಾಕ್ ತಂಡದ ಬೌಲಿಂಗ್ ವಿಭಾಗದಲ್ಲಿ ಸಂಚಲನ ಮೂಡಿಸುವುದು ಖಚಿತ.
ಇನ್ನು ದ್ವಿತೀಯ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾದಲ್ಲೂ ಬದಾವಣೆ ಆದರೆ ಅಚ್ಚರಿ ಪಡಬೇಕಿಲ್ಲ. ದಿನೇಶ್ ಕಾರ್ತಿಕ್​​ಗೆ ಸರಿಯಾದ ಸ್ಥಾನ ಸಿಗುತ್ತಿಲ್ಲ. ಸಿಕ್ಕ ಸ್ಥಾನದಲ್ಲಿ ಅವರು ಕೆಲ ಪಂದ್ಯಗಳಲ್ಲಿ ವೈಫಲ್ಯ ಕೂಡ ಅನುಭವಿಸುತ್ತಿದ್ದಾರೆ. ಹೀಗಾಗಿ ಇವರ ಜಾಗದಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅಕ್ಷರ್ ಪಟೇಲ್ ಬಿಟ್ಟರೆ ಎಡಗೈ ಬ್ಯಾಟರ್​ ಮತ್ಯಾರು ಇಲ್ಲ. ಪಂತ್ ಬಂದರೆ ತಂಡಕ್ಕೆ ಇದು ಕೂಡ ಒಂದು ಪ್ಲಸ್ ಪಾಯಿಂಟ್ ಆಗಲಿದೆ.
ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆದರೆ, ಆಸ್ಟ್ರೇಲಿಯ ಈ ತಾಣದಲ್ಲಿ ಈವರೆಗೆ ಒಂದೂ ಪಂದ್ಯವನ್ನು ಆಡಿಲ್ಲ. ಹೀಗಾಗಿ ಈ ವಾತಾವರಣ ಭಾರತಕ್ಕೆ ಪ್ಲಸ್ ಆದರೂ ಆಗಬಹುದು. ಪಿಚ್ ಸಾಮಾನ್ಯವಾಗಿ ಬ್ಯಾಟ್ ಮತ್ತು ಬಾಲ್ ನಡುವೆ ಸ್ವಲ್ಪ ಸಮತೋಲನವನ್ನು ಹೊಂದಿರುತ್ತದೆ. ಆದರೆ ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ. ಯಾಕೆಂದರೆ ಇಲ್ಲಿ ಚೇಸಿಂಗ್ ಮಾಡುವುದು ಕಠಿಣ ಎಂಬುದು ಹಿಂದಿನ ದಾಖಲೆಗಳು ಹೇಳುತ್ತಿವೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.









































































































































































error: Content is protected !!
Scroll to Top