ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹೈ-ವೋಲ್ಟೇಜ್ ಪಂದ್ಯ ಸಲುವಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಗುರುವಾರ ಹೈದರಾಬಾದ್ನ ಜಿಮ್ಖಾನಾ ಗ್ರೌಂಡ್ನಲ್ಲಿ ಟಿಕೆಟ್ ಮಾರಾಟ ನಡೆಸಿತ್ತು. ಈ ಸಂದರ್ಭದಲ್ಲಿ ಟಿಕೆಟ್ ಖರೀದಿಗೆ ಜನಸಾಗರವೇ ಹರಿದುಬಂದು ನೂಕುನುಗ್ಗಾಟದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.
ವರದಿಗಳ ಪ್ರಕಾರ ಟಿಕೆಟ್ ಖರೀದಿ ಸಲುವಾಗಿ ಜನರು ಬೆಳಗ್ಗೆ 5 ಗಂಟೆಯಿಂದಲೇ ಸಾಲು ನಿಂತಿದ್ದಾರೆ. ಹೀಗಾಗಿ ಟಿಕೆಟ್ ಕೌಂಟರ್ ತೆಗೆವ ಮುನ್ನ ಸಾವಿರಾರು ಸಂಖ್ಯೆಯಲ್ಲಿ ಜನರು ಅಲ್ಲಿ ಜಮಾಯಿಸಿದ್ದಾರೆ. ಸಾವಿರಾ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಭಾಯಿಸುವುದು ಅಲ್ಲಿನ ಅಧಿಕಾರಿಗಳಿಗೆ ಕಷ್ಟವಾಗಿದೆ. ಮೂಲಗಳು ನೀಡಿರುವ ಮಾಹಿತಿ ಅನುಸಾರ 4 ಮಂದಿ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಟಿಕೆಟ್ ಖರೀದಿಗಾಗಿ ನೂಕುನುಗ್ಗಾಟ, ನಾಲ್ವರು ಆಸ್ಪತ್ರೆಗೆ ದಾಖಲು!
