ಸುನೀಲ್ ರಾಜ್ಯ ರಾಜಕಾರಣದ ಶಕ್ತಿ – ವಿಶ್ವೇಶ್ವರ ಹೆಗಡೆ ಕಾಗೇರಿ
ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತಂದ ಕೀರ್ತಿ ಸುನೀಲ್ ಕುಮಾರ್ಗೆ ಸಲ್ಲಬೇಕು – ಅಜಿತ್ ಹನುಮಕ್ಕನವರ್
ಒಗ್ಗಟ್ಟಾಗಿ ಸ್ವರ್ಣ ಕಾರ್ಕಳದ ಪರಿಕಲ್ಪನೆ ಸಾಕಾರಗೊಳಿಸೋಣ – ಸುನೀಲ್ ಕುಮಾರ್
ಕಾರ್ಕಳ : ಕ್ರಿಯಾಶೀಲ ಸಚಿವ ಸುನೀಲ್ ಕುಮಾರ್ ರಾಜ್ಯ ರಾಜಕಾರಣದ ಶಕ್ತಿ. ಅವರು ಕಾರ್ಕಳಕ್ಕೆ ಮಾತ್ರವಲ್ಲದೇ ಕರ್ನಾಟಕ ವಿಧಾನ ಸಭೆಗೆ ಹೆಮ್ಮೆಯ ವ್ಯಕ್ತಿ ಎಂದು ವಿಧಾನ ಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ಅವರು ಸೆ. 18ರಂದು ಬೆಂಗಳೂರಿನ ಅರಮನೆ ಮೈದಾನದ ಸಾಗರ್ ಗಾಯತ್ರಿ ವಿಹಾರ್ ಸಭಾಂಗಣದಲ್ಲಿ ನಡೆದ ಸ್ನೇಹಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ನೆಲೆಸಿರುವ ಕಾರ್ಕಳ ಕ್ಷೇತ್ರದ ಜನತೆಯನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಿರುವುದು ವಿನೂತನ ಪರಿಕಲ್ಪನೆ. ಕಾರ್ಕಳದ ಜನತೆ ತಮ್ಮತನವನ್ನು ಬಿಡಬಾರದು. ಸುನೀಲ್ ಕುಮಾರ್ ಅವರ ಕಾರ್ಯಕ್ಕೆ ಸದಾ ಬೆಂಬಲವಾಗಿ ನಿಲ್ಲಬೇಕೆಂದರು.
ಅಮೂಲಾಗ್ರ ಬದಲಾವಣೆ
ಸುನೀಲ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ, ಇಂಧನ ಇಲಾಖೆ ಸಚಿವರಾದ ಬಳಿಕ ತಮ್ಮ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಸುನೀಲ್ ಕುಮಾರ್ ಅವರಿಂದಾಗಿ ಕನ್ನಡ ರಾಜ್ಯೋತ್ಸವ ಸಂದರ್ಭ ಅರ್ಹರಿಗೆ ಪ್ರಶಸ್ತಿ ದೊರೆಯುವಂತಾಗಿದೆ ಎಂದು ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಹೇಳಿದರು. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರೋರ್ವರು ವಿದ್ಯುತ್ ಕಂಬದಿಂದ ಬಿದ್ದು ಗಾಯಗೊಂಡ ಸಂದರ್ಭದಲ್ಲಿ ಈ ಕುರಿತು ಏನಂತೀರಿ ಎಂದು ಕೇಳಿದಾಗ ಸುನೀಲ್ ಕುಮಾರ್ ಅವರು ನಮ್ಮ ಕಚೇರಿಗೆ ಚೆಕ್ ಸಹಿತ ಬಂದು ಆತನಿಗೆ ಉದ್ಯೋಗದ ಭರವಸೆ ನೀಡಿರುತ್ತಾರೆ. ವಿದ್ಯುತ್ ಇಲಾಖೆಯಲ್ಲಿ ಅಕ್ರಮವೆಸಗಿದ ಕುರಿತು ದೂರು ಕೇಳಿ ಬಂದಾಗ ತಕ್ಷಣವೇ ಸಮಿತಿಯೊಂದನ್ನು ರಚಿಸಿ ತನಿಖೆಗೆ ಆದೇಶಿಸಿರುತ್ತಾರೆ. ಕರೆಂಟಿಲ್ಲದ ಮನೆಗೆ ಬೆಳಕು ನೀಡಿರುತ್ತಾರೆ ಎಂದು ಸುನೀಲ್ ಕಾರ್ಯಶೈಲಿ ಕುರಿತು ಅಜಿತ್ ಅವರು ಗುಣಗಾನ ಮಾಡಿದರು.
ಕಾರ್ಕಳದ ಜನತೆ ಅದೃಷ್ಟವಂತರು
ಸುನೀಲ್ ಕುಮಾರ್ ಅವರಂತಹ ಶಾಸಕರನ್ನು ಪಡೆದ ಕಾರ್ಕಳದ ಜನತೆ ಅದೃಷ್ಟವಂತರು. ಅದೇ ರೀತಿ ಸುನೀಲ್ ಅವರು ಪ್ರಜ್ಞಾವಂತ ಮತದಾರರನ್ನು ಹೊಂದಿರುವುದು ಕೂಡ ಪುಣ್ಯವೆಂದು ಅಜಿತ್ ಬಣ್ಣಸಿದರು.
ಪ್ರೀತಿಗೆ ಸಾಕ್ಷಿ
ಈ ಸಭಾಂಗಣ ತುಳುವಿನಿಂದಲೇ ತುಂಬಿ ತುಳುಕುತ್ತಿದೆ. ಈ ಒಂದು ಕಾರ್ಯಕ್ರಮಕ್ಕೆ ಮೂರು ಸಾವಿರ ಮಂದಿ ಸೇರಿರುವುದು ಶಾಸಕರ ಮೇಲಿನ ಪ್ರೀತಿಗೆ ಸಾಕ್ಷಿ ಎಂದು ಅಜಿತ್ ಹೇಳಿದರು.
ಕಾರ್ಕಳದ ಅಭಿವೃದ್ದಿ ಕಾರ್ಯದ ಕುರಿತು ಎಳೆಎಳೆಯಾಗಿ ತಿಳಿಸಿದ ಸುನೀಲ್ ಕುಮಾರ್, ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯದಲ್ಲೇ ಕೆಜೆಟಿಕೆ ಮೊದಲಾಗಿ ಸ್ಥಾಪನೆಯಾಗಿರುವುದು ಕಾರ್ಕಳದಲ್ಲಿ. ಇಲ್ಲಿನ ಒಳಾಂಗಣ ಕ್ರೀಡಾಂಗಣ, ಹೆಬ್ರಿ ಆಡಳಿತ ಸೌಧ, ಕಾರ್ಕಳದ ಯುಜಿಡಿ ಕಾರ್ಯ ಸೇರಿದಂತೆ ಹತ್ತಾರು ಹೊಸ ಯೋಜನೆಗಳು ಅನುಷ್ಠಾನವಾಗಿದೆ ಎಂದರು. ಸಚಿವನಾದ ಬಳಿಕ ಕಾರ್ಕಳದಲ್ಲಿ ಮೆಸ್ಕಾಂ ಉಪವಿಭಾಗ, ಯಕ್ಷರಂಗಾಯಣ ಸ್ಥಾಪನೆ ಮಾಡಲಾಗಿದೆ. ಅಭಿವೃದ್ದಿ ಎನ್ನುವುದು ನಿರಂತರ ಪ್ರಕ್ರಿಯೆ. ಸ್ವರ್ಣ ಕಾರ್ಕಳದ ಕಲ್ಪನೆ ಸಾಕಾರಕ್ಕಾಗಿ ಸರ್ವರ ಸಹಕಾರ ಬೇಕು. ಹೊರ ನಾಡಿನಲ್ಲಿರುವ ಕಾರ್ಕಳದ ಜನತೆಯ ಸಲಹೆ ಬೇಕೆಂದರು.
ಉಡುಪಿ ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಉದ್ಯಮಿಗಳಾದ ಗುರುದಾಸ್ ಶ್ಯಾನ್ ಭೋಗ್, ವೆಂಕಪ್ಪ ಹೆಗ್ಡೆ, ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಮುದ್ರಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಾಯಕ ಜಗದೀಶ್ ಪುತ್ತೂರು ಪ್ರಾರ್ಥಿಸಿ, ಯೋಗೀಶ್ ಹೆಗ್ಡೆ ಸ್ವಾಗತಿಸಿದರು. ಶಶಿಧರ್ ಕಂಟಬೆಟ್ಟು ಪ್ರಾಸ್ತವಿಕ ಮಾತನಾಡಿದರು. ಆತ್ಮೀಯ ಕಡಂಬ ನಿರೂಪಿಸಿ, ವಿಕಾಸ್ ಹೆಗ್ಡೆ ವಂದಿಸಿದರು.