ಅಹ್ಮದ್ನಗರ: ಬಿಜೆಪಿಯ ಮಾಜಿ ವಕ್ತಾರೆ ನೂಪುರ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕೆ ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯಲಾಲ್ ಅವರ ಕತ್ತು ಕೊಯ್ದ ಘಟನೆ ಜನರ ನೆನರಿನಿಂದ ಮರೆಯಾಗುವ ಮೊದಲೇ ಈಂಥ ಹಲ್ಲೆಗಳು ಮತ್ತೆ ಮತ್ತೆ ನಡೆಯುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ನೂಪುರ್ ಬೆಂಬಲಿಸಿ ಹಾಕಿರುವ ಯುವಕನೊಬ್ಬನ ಮೇಲೆ ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯಲ್ಲಿ ಮಾರಕ ದಾಳಿ ನಡೆಸಲಾಗಿದ್ದು, ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಸಂಜೆ ಅಹ್ಮದ್ನಗರದ ಕರ್ಜತ್ ನಗರದಲ್ಲಿ 15-20 ಜನರ ಗುಂಪು ಹರಿತವಾದ ಆಯುಧಗಳಿಂದ ಪ್ರತೀಕ್ ಪವಾರ್ ಮೇಲೆ ಮಾರಕ ದಾಳಿ ನಡೆಸಿದ್ದು, ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ತಲುವಾರು, ಚಾಕು ಇತ್ಯಾದಿ ಹರಿತವಾದ ಆಯುಧಗಳಿಂದ ಏಕಾಂಗಿ ಯುವಕನ ಮೇಲೆ ದಾಳಿ ನಡೆಸಲಾಗಿದೆ. ಕನ್ಹಯ್ಯ ಲಾಲ್ ಮತ್ತು ಉಮೇಶ್ ಕೊಲ್ಹೆ ಬಗ್ಗೆ ಬರೆದಿರುವುದಕ್ಕೆ ಮತ್ತು ನೂಪರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿರುವುದಕ್ಕೆ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಗಾಯಗೊಂಡ ಪ್ರತೀಕ್ ಸಂಬಂಧಿ ಪ್ರಜ್ಯೋತ್ ಪವರ್ ಮಾಹಿತಿ ನೀಡಿದ್ದಾರೆ.
ನೂಪರ್ ಶರ್ಮಾ, ಕನ್ನಯ್ಯ ಲಾಲ್ ಬೆಂಬಲ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿಯಾ? ಈ ಕುರಿತು ಇನ್ಸ್ಟಾಗ್ರಾಂ ಮತ್ತು ವಾಟ್ಸಪ್ ಸ್ಟೇಟಸ್ಗಳಲ್ಲಿ ಪೋಸ್ಟ್ ಮಾಡ್ತಿಯಾ, ನಿನ್ನಂಥವರಿಂದಾಗಿ ಇತರರೂ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ನಿನ್ನನ್ನೂ ಉಮೇಶ್ ಕೊಲ್ಹೆ ರೀತಿ ಮಾಡ್ತಿವಿ ಎಂದು ಹೇಳಿ ತಲವಾರಿನಿಂದ ಈತನ ಮೇಲೆ ದಾಳಿ ನಡೆಸಿದ್ದಾರೆ ಎಂದು ಪ್ರತೀಕ್ ಸ್ನೇಹಿತ ತಿಳಿಸಿದ್ದಾರೆ.