ಕಾರ್ಕಳ : ಕಾರ್ಕಳದ ಆರ್. ಗೌತಮ್ ಶೆಣೈ ಅವರು ಕಂಪ್ಯೂಟರ್ ಸೈನ್ಸ್ ನಲ್ಲಿ ಆನ್ ಎಫೆಕ್ಟಿವ್ ವೆರಿಫಿಕೇಶನ್ ಆಫ್ ರೆಪ್ಲಿಕೇಟೆಡ್ ಡೇಟಾ ಟೈಪ್ಸ್ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಚೆನ್ನೈ ಮ್ಯಾಥಮ್ಯಾಟಿಕಲ್ ಇನ್ಸ್ಸ್ಟೀಟ್ಯೂಟ್ನಿಂದ ಡಾಕ್ಟರೇಟ್ ಪದವಿ ದೊರೆತಿದೆ. ಚೆನ್ನೈನ ಪ್ರತಿಷ್ಠಿತ ಗಣಿತ ಶಾಸ್ತ್ರ ಸಂಶೋಧನಾ ಕೇಂದ್ರದ ಡೈರೆಕ್ಟರ್ ಡಾ. ಮಾಧವನ್ ಮುಕುಂದ್ ಮತ್ತು ಎಸ್.ಪಿ. ಸುರೇಶ್ ರವರ ಮಾರ್ಗದರ್ಶನದಲ್ಲಿ ಗೌತಮ್ ಪ್ರಬಂಧ ಮಂಡಿಸಿದ್ದರು. ಕಾರ್ಕಳದ ವೈದ್ಯ ಡಾ. ಆರ್. ಗಿರೀಶ್ ಶೆಣೈ ಮತ್ತು ಆರ್. ನಿರ್ಮಲಾ ಶೆಣೈ ದಂಪತಿ ಪುತ್ರರಾಗಿರುವ ಗೌತಮ್ ಅವರು ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಪೂರೈಸಿದ್ದರು. ನಿಟ್ಟೆಯ ಎನ್.ಎಸ್.ಎ.ಎಂ. ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದಿದ್ದು, 2002ರಲ್ಲಿ ಸಿ.ಇ.ಟಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ 27ನೇ ರ್ಯಾಂಕ್ ಪಡೆದಿದ್ದರು. 2012ರಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಎಂ.ಎಸ್ಸಿ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದ ಅವರು ಎನ್ಐಟಿಕೆಯಲ್ಲಿ ಬಿಇ ಪದವಿ ಪೂರೈಸಿರುತ್ತಾರೆ. ಪ್ರಸ್ತುತ ಗೌತಮ್ ಶೆಣೈ ಅವರು ಐಬಿಎಂ ಸಂಸ್ಥೆಯ ಉದ್ಯೋಗಿಯಾಗಿರುತ್ತಾರೆ.