ಬೆಂಗಳೂರು: ಇಲ್ಲಿನ ತಿಲಕ್ ನಗರದಲ್ಲಿ ಭಾನುವಾರ ರಾತ್ರಿ ಶಂಕಿತ ಉಗ್ರನೊಬ್ಬನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಅಖ್ತರ್ ಹುಸೇನ್ ಲಷ್ಕರ್ ಸೆರೆಯಾಗಿರುವ ಶಂಕಿತ ಉಗ್ರ. ಸಿಸಿಬಿ ಪೊಲೀಸರು ಹಲವು ಸಮಯದಿಂದ ಅವನ ಮೇಲೆ ಕಣ್ಣಿಟ್ಟು ನಿನ್ನೆ ರಾತ್ರಿ ಬಂಧಿಸಿದ್ದಾರೆ.
ಅಸ್ಸಾಂನ ಅಖ್ತರ್ ತಿಲಕ್ ನಗರದಲ್ಲಿ ಅಪಾರ್ಟ್ಮೆಂಟ್ ಒಂದರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅವನ ಜತೆಗೆ ಕೆಲವು ಆಹಾರ ಡೆಲಿವರಿ ಬಾಯ್ಗಳು ಕೂಡ ಇದ್ದರು.ಕೇಂದ್ರ ಗುಪ್ತಚರ ಪಡೆ ಸಿಸಿಬಿ ಪೊಲೀಸರಿಗೆ ಅಖ್ತರ್ ಕುರಿತು ಮಾಹಿತಿ ನೀಡಿತ್ತು.
ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದ ಅಖ್ತರ್ ಅಸ್ಸಾಂ ಪೊಲೀಸರಿಂದ ತಪ್ಪಿಸುವ ಸಲುವಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದ. ಕೆಲ ದಿನಗಳ ಹಿಂದೆಯಷ್ಟೇ ಓಕುಳಿಪುರದಲ್ಲಿ ತಾಲಿಬ್ ಹುಸೇನ್ ಎಂಬ ಉಗ್ರ ಸೆರೆಯಾಗಿದ್ದ. ಉಗ್ರರು ಬೆಂಗಳೂರನ್ನು ಸುರಕ್ಷಿತ ಅಡಗುತಾಣ ಮಾಡಿಕೊಂಡಿರುವುದು ಕಳವಳಕಾರಿಯಾಗಿದೆ.