ಹೆಬ್ರಿ : ರಾಜ್ಯ ಮಟ್ಟದ ಕಬಡ್ಡಿ ಆಟಗಾರ, ಹೆಬ್ರಿ ತಾಲೂಕು ಮುದ್ರಾಡಿಯ ಬಲ್ಲಾಡಿ ನಿವಾಸಿ ಸುಶಾಂತ್ ಶೆಟ್ಟಿ (32) ಜು. 22ರ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅನಾರೋಗ್ಯಕ್ಕೀಡಾಗಿದ್ದ ಸುಶಾಂತ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ತಂದೆ ಗುಣಕರ್ ಶೆಟ್ಟಿ, ತಾಯಿ, ಸಹೋದರ ಸುದೀಪ್, ಸಹೋದರಿ ಚಿತ್ರಾ, ಪತ್ನಿ ಅಶ್ವಿತಾ ಹಾಗೂ 1 ವರ್ಷದ ಪುತ್ರನನ್ನು ಅಗಲಿದ್ದಾರೆ.
ಇಲಿ ಜ್ವರದ ಶಂಕೆ
ಸುಶಾಂತ್ ಶೆಟ್ಟಿ ಉಡುಪಿಯ ಫೈನಾನ್ಸ್ವೊಂದರಲ್ಲಿ ಉದ್ಯೋಗಿಯಾಗಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ತೀವ್ರಗೊಂಡ ಕಾರಣ ಶುಕ್ರವಾರ ಮಣಿಪಾಲ ಆಸ್ಪತ್ರೆಗೆ ಸುಶಾಂತ್ ದಾಖಲಾದರು. ವಿಪರೀತ ಜ್ವರದ ಕಾರಣ ಕಿಡ್ನಿ ಮತ್ತು ಲಿವರ್ನ ಮೇಲೂ ಪರಿಣಾಮ ಬೀರಿತು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ತಡರಾತ್ರಿ ಕೊನೆಯುಸಿರೆಳೆದರು. ಸಾವಿಗೆ ನಿಖರ ಕಾರಣ ವೈದ್ಯಕೀಯ ವರದಿಯಿಂದ ಇನ್ನಷ್ಟೇ ಬರಬೇಕಿದೆ. ಯಾವುದೇ ಥರದ ಜ್ವರ ಕಾಣಿಸಿಕೊಂಡರೂ ಕೂಡಲೇ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಿಸಬೇಕು. ಇಲಿಜ್ವರವನ್ನೂ ಪ್ರಾರಂಭಿಕ ಹಂತದಲ್ಲಿ ಗುಣಪಡಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.