ಹೊಸದಿಲ್ಲಿ: ಹರ್ಯಾಣದಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಹೋದ ಡಿವೈಎಸ್ಪಿಯನ್ನು ವಾಹನ ಹತ್ತಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆಯ ಬೆನ್ನಲ್ಲೇ ಇದೇ ಮಾದರಿಯ ಘಟನೆಯೊಂದು ಜಾರ್ಖಂಡ್ನಲ್ಲಿ ಸಂಭವಿಸಿದೆ.
ವಾಹನ ತಪಾಸಣೆ ನಡೆಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಸಂಧ್ಯಾ ಟೋಪ್ನೊ ಎಂಬವರನ್ನು ದುಷ್ಕರ್ಮಿಗಳು ಬುಧವಾರ ನಸುಕಿನ ಹೊತ್ತು ಪಿಕಪ್ ವ್ಯಾನ್ ಹತ್ತಿಸಿ ಕೊಲೆ ಮಾಡಿದ್ದಾರೆ.
ಜಾರ್ಖಂಡ್ನ ರಾಂಚಿಯಲ್ಲಿ ನಸುಕಿನ ಹೊತ್ತು ಈ ಆಘಾತಕಾರಿ ಘಟನೆ ಸಂಭವಿಸಿದೆ. ಮಂಗಳವಾರ ಹರ್ಯಾಣದ ನುಹ್ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆಯಲು ಹೊದ ಡಿವೈಎಸ್ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರನ್ನು ವಾಹನ ಹತ್ತಿಸಿ ಸಾಯಿಸಿದ್ದರು.
ರಾಂಚಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ನಡೆಯುತ್ತಿರುವ ಮಾಹಿತಿ ಸಿಕ್ಕಿ ಸಬ್ ಇನ್ಸ್ಪೆಕ್ಟರ್ ಸಂಧ್ಯಾ ಅವರು ವಾಹನ ತಪಾಸಣೆ ಕೈಗೊಂಡಿದ್ದರು. ನಸುಕಿನ ಹೊತ್ತು ಬಂದ ಪಿಕ್ ಅಪ್ ವಾಹನ ಪೊಲೀಸರು ನಿಲ್ಲಲು ಸೂಚಿಸಿದರೂ ನಿಲ್ಲದೆ ತಪಾಸಣೆ ನಡೆಸುತ್ತಿದ್ದ ಸಂಧ್ಯಾ ಅವರಿಗೆ ಗುದ್ದಿ ಅವರ ಮೇಲೆ ಹರಿದುಕೊಂಡು ಹೋಗಿದೆ. ಪೊಲೀಸರು ವಾಹನವನ್ನು ಬೆನ್ನಟ್ಟಿದರೂ ಸಿಗಲಿಲ್ಲ. ನಂತರ ಸಿಸಿಟಿವಿ ಫೂಟೇಜ್ ಆಧಾರದಲ್ಲಿ ವಾಹನವನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಲಾಗಿದೆ.
ಪಿಕ್ಅಪ್ ಹತ್ತಿಸಿ ಮಹಿಳಾ ಎಸ್ಐ ಹತ್ಯೆ
