ಕಾರ್ಕಳ : ಮೆಣಸಿನ ಪುಡಿ ಎರಚಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಕೆರ್ವಾಶೆ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕೆರ್ವಾಶೆಯ ಮಹಾಲಿಂಗ ಭಟ್ ಎಂಬವರ ಮನೆಗೆ ಭಾನುವಾರ ರಾತ್ರಿ 1:30ರ ಸುಮಾರಿಗೆ ಇಬ್ಬರು ಅಪರಿಚಿತರು ಬಂದು ಮುಖಕ್ಕೆ ಮೆಣಸಿನ ಪುಡಿ ಎರಚಿ, ಮಹಾಲಿಂಗ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡು ಪಂಚೆಯನ್ನು ಹಿಡಿದೆಳೆದು ಅವರ ಮುಖಕ್ಕೆ ಸುತ್ತಿ ಕೂಗಾಡದಂತೆ ಕುತ್ತಿಗೆ ಒತ್ತಿ ಹಿಡಿದಿರುತ್ತಾರೆ. ಜೋರಾಗಿ ಬೊಬ್ಬೆ ಹೊಡೆದಾಗ ಅವರ ಕೈಯಲ್ಲಿದ್ದ ಟಾರ್ಚನ್ನು ಕಸಿದುಕೊಂಡು ಪರಾರಿಯಾಗಿರುತ್ತಾರೆ. ಮನೆಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಈ ರೀತಿ ಮಾಡಿರಬೇಕೆಂದು ಮಹಾಲಿಂಗ ಅವರು ಅಜೆಕಾರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.