ಸುಳ್ಯ: ಕಾಡಮಲ್ಲಿಗೆ ತುಳು ಪ್ರಸಂಗದಿಂದ ಪ್ರಸಿದ್ಧಿಯ ಉತ್ತುಂಗಕ್ಕೆ ಏರಿದ್ದ ಹಿರಿಯ ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ಅನಾರೋಗ್ಯದಿಂದಾಗಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಮಂಡೆಚ್ಚ, ಅಳಿಕೆ, ಬೋಳಾರ, ಸಾಮಗ, ಪುಳಿಂಚ ಮತ್ತಿತರ ಹಿರಿಯರ ಸಮಕಾಲೀನರಾಗಿದ್ದ ವಿಶ್ವನಾಥ ರೈ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ತುಳು ಮತ್ತು ಕನ್ನಡ ಪ್ರಸಂಗಗಳಲ್ಲಿ ಅವರು ಹೆಸರುವಾಸಿಯಾಗಿದ್ದರು.
1949ರಲ್ಲಿ ಬೆಳ್ಳಾರೆಯಲ್ಲಿ ಜನಿಸಿದ ವಿಶ್ವನಾಥ ರೈ ಶಾಲೆಯಲ್ಲಿ ಕಲಿತದ್ದು ಎರಡನೇ ತರಗತಿಯವರೆಗೆ ಮಾತ್ರ. ಅಚ್ಯುತ ಮಣಿಯಾಣಿ ಅವರಿಂದ ಯಕ್ಷ ನಾಟ್ಯಾಭ್ಯಾಸ ಕಲಿತ ಬಳಿಕ 9ನೇ ವರ್ಷ ಪ್ರಾಯದಲ್ಲಿ ರಂಗ ಪ್ರವೇಶ ಮಾಡಿದ್ದರು. ಕರ್ನಾಟಕ ಮೇಳದಲ್ಲಿ 35 ವರ್ಷ ತಿರುಗಾಟ ಮಾಡಿದ್ದರು. ಈ ಮೇಳದ ಬಹಳ ಯಶಸ್ವಿಯಾದ ಕಾಡಮಲ್ಲಿಗೆ ಪ್ರಸಂಗ ವಿಶ್ವನಾಥ ರೈವರಿಗೂ ಹೆಸರು ತಂದುಕೊಟ್ಟಿತ್ತು. ಮಧೂರು, ಎಡನೀರು, ಕಟೀಲು, ಬಪ್ಪನಾಡು,ಕುಂಟಾರು ಮೇಳಗಳಲ್ಲೂ ಕಿರು ಅವಧಿಗೆ ತಿರುಗಾಟ ಮಾಡಿದ್ದರು.
ಕಾಡಮಲ್ಲಿಗೆ ಖ್ಯಾತಿಯ ವಿಶ್ವನಾಥ ರೈ ಇನ್ನಿಲ್ಲ
