ಸಂಭಾಲ್: ಹಿಂದೂ ದೇವತೆಗಳ ಚಿತ್ರಗಳಿರುವ ಪತ್ರಿಕೆ ಮೇಲೆ ಚಿಕನ್ ಹಾಕಿ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂಡ ಆರೋಪದಲ್ಲಿ ಉತ್ತರ ಪ್ರದೇಶದ ಸಂಭಾಲ್ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈತ ಪೊಲೀಸ್ ತಂಡದ ಮೇಲೆ ದಾಳಿ ಕೂಡ ಮಾಡಿದ್ದ ಎಂದು ಆರೋಪಿಸಲಾಗಿದೆ.
ಮಾಂಸ ವ್ಯಾಪಾರಿ ತಾಲಿಬ್ ಹುಸೇನ್ ಎಂಬಾತ ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳಿರುವ ಪತ್ರಿಕೆಯನ್ನು ತನ್ನ ಅಂಗಡಿಯ ಟೇಬಲ್ ಮೇಲೆ ಹರಡಿ ಅದರ ಮೇಲೆ ಇಟ್ಟು ಚಿಕನ್ ಮಾಂಸ ಇಟ್ಟು ಮಾರುತ್ತಿದ್ದ. ಅವನ ವಿರುದ್ಧ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಕುರಿತು ದೂರು ನೀಡಲಾಗಿತ್ತು.
ಪೊಲೀಸರ ತಂಡ ಅಂಗಡಿಗೆ ತೆರಳಿದಾಗ ತಾಲಿಬ್ ಹುಸೇನ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ತಾಲಿಬ್ ಹುಸೇನ್ ವಿರುದ್ಧ ಐಪಿಸಿ ಸೆಕ್ಷನ್ 153-ಎ (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ ಹಿನ್ನೆಲೆಯಲ್ಲಿ ವಿಭಿನ್ನ ಗುಂಪುಗಳ ಮಧ್ಯೆ ವೈರತ್ವ ಪ್ರಚಾರ ಮಾಡುವುದು), ಸೆಕ್ಷನ್ 295 ಎ (ಧರ್ಮ ಅಥವಾ ಧಾರ್ಮಿಕ ನಂಬಿಕೆಗೆ ಅವಮಾನ ಮಾಡುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಉದ್ದೇಶಪೂರ್ವಕ ಮತ್ತು ಕೇಡಬುದ್ಧಿಯ ಕೃತ್ಯಗಳು) 307 (ಕೊಲೆ ಪ್ರಯತ್ನ) ಪ್ರಕರಣಗಳನ್ನು ದಾಖಲಿಸಲಾಗಿದೆ.
