ಕುಂದಾಪುರ : ಮರವಂತೆ ಸಮುದ್ರ ತೀರದಲ್ಲಿ ಜು.3ರ ನಸುಕಿನ ವೇಳೆ ಸಂಭವಿಸಿದ ಕಾರು ಅಪಘಾತದಲ್ಲಿ ಸಮುದ್ರ ಪಾಲಾಗಿದ್ದ ರೋಶನ್ ಆಚಾರ್ಯ (23) ಎಂಬವರ ಮೃತದೇಹವು ಇಂದು ಸಂಜೆ ತ್ರಾಸಿಯ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ. ನಿನ್ನೆ ನಸುಕಿನ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯಿಂದ ಪಲ್ಟಿಯಾಗಿ ಸಮುದ್ರಕ್ಕೆ ಬಿದ್ದಿತ್ತು. ಈ ವೇಳೆ ರೋಶನ್ ಆಚಾರ್ಯ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದರು.
ನಿನ್ನೆ ಬೆಳಿಗ್ಗೆನಿಂದ ರೋಶನ್ ಆಚಾರ್ಯ ಅವರಿಗಾಗಿ ವ್ಯಾಪಕ ಶೋಧ ನಡೆಸಿ ರಾತ್ರಿ ಶೋಧ ನಿಲ್ಲಿಸಲಾಗಿತ್ತು. ಬಳಿಕ ಇಂದು ಕೂಡಾ ಹುಡುಕಾಟ ಮುಂದುವರೆಸಲಾಗಿತ್ತಾದರೂ, ಈ ನಡುವೆ ರೋಶನ್ ಅವರ ಮೃತದೇಹ ತ್ರಾಸಿಯ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ.
ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಕಾರ್ಯಾಚರಣೆಗೆ ಕರೆಸಲಾಗಿತ್ತು. ಸ್ಥಳದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪಿಎಸ್ಐ ವಿನಯ್ ಕುಮಾರ್ ಹಾಜರಿದ್ದರು.