ಸೋಮೇಶ್ವರಪೇಟೆ : 32 ಲಕ್ಷ ವೆಚ್ಚದ ಶಾಲಾ ಕಟ್ಟಡ ಉದ್ಘಾಟನೆ

ಹೆಬ್ರಿ : ಸರಕಾರಿ ಶಾಲೆಗಳ ಬಲವರ್ಧನೆಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗಳನ್ನು ಆರಂಭಿಸಲಾಗಿದೆ. ಕಾರ್ಕಳ ಕ್ಷೇತ್ರದಲ್ಲಿ 3 ಪಬ್ಲಿಕ್‌ ಸ್ಕೂಲ್‌ಗಳನ್ನು ತೆರೆಯಲಾಗಿದೆ ಎಂದು ಸಚಿವ ಸುನೀಲ್‌ ಕುಮಾರ್‌ ಹೇಳಿದರು.
ಅವರು ಗುರುವಾರ ಸೋಮೇಶ್ವರಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೂ. 32 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಮುನಿಯಾಲಿನ ಕೆಪಿಎಸ್‌ನಲ್ಲಿ 7೦೦ ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಕೆಪಿಎಸ್‌ಗೆ ಸಕಲ ವ್ಯವಸ್ಥೆಯೊಂದಿಗೆ ಕ್ರೀಡೆ, ಸಂಗೀತ, ಚಿತ್ರಕಲೆ ಸಹಿತ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಕಾರ್ಕಳ ಕ್ಷೇತ್ರದ 240 ಸರಕಾರಿ ಶಾಲೆಗಳಿಗೆ ಅತ್ಯುತ್ತಮ ಅಡುಗೆ ಕೋಣೆ ನಿರ್ಮಿಸಲಾಗಿದೆ. ಆದ್ಯತೆಯ ನೆಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ ಎಂದು ಸುನೀಲ್‌ ಕುಮಾರ್‌ ಹೇಳಿದರು.

ಉತ್ತಮ ವಾತಾವರಣ
ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಉತ್ತಮ ವಾತಾವರಣ ನಿರ್ಮಾಣಗೊಂಡು ಯುವ ಸಮುದಾಯಕ್ಕೆ ಉದ್ಯೋಗ ದೊರೆಯುವಂತಾಗಬೇಕು. ಅದಕ್ಕಾಗಿ ಕಾರ್ಕಳದಲ್ಲಿ ನರ್ಸಿಂಗ್‌ ಕಾಲೇಜು, ಜಪಾನ್‌ ಟೆಕ್ನಾಲಜಿ ಕೋರ್ಸ್‌ ಆರಂಭಿಸಲಾಗಿದೆ ಎಂದ ಸಚಿವರು ನಾಡ್ಪಾಲು ಗ್ರಾಮದ ಸಮಗ್ರ ಅಭಿವೃದ್ಧಿಗೆ ಆದ್ಯತೆಯ ನೆಲೆಯಲ್ಲಿ ವಿಶೇಷ ಒತ್ತು ನೀಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡ್ಪಾಲು ಗ್ರಾ. ಪಂ. ಅಧ್ಯಕ್ಷ ದಿನೇಶ ಹೆಗ್ಡೆ, ಸೋಮೇಶ್ವರಪೇಟೆ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು. ಕಟ್ಟಡ ಗುತ್ತಿಗೆದಾರರಾದ ಹೆರ್ಗ ದಿನಕರ ಶೆಟ್ಟಿ ಮತ್ತು ನಾಡ್ಪಾಲು ಸುಧಾಕರ ಹೆಗ್ಡೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹೆಬ್ರಿ ತಹಶೀಲ್ಧಾರ್‌ ಪುರಂದರ್‌ ಕೆ, ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಶಶಿಧರ್‌ ಕೆ.ಜಿ., ನಾಡ್ಪಾಲು ಗ್ರಾ. ಪಂ. ಉಪಾಧ್ಯಕ್ಷ ನವೀನ್‌ ಕುಮಾರ್‌, ಪಿಡ್ಲ್ಯುಡಿ ಇಲಾಖೆಯ ಸೋಮಶೇಖರ್‌, ಶಿಕ್ಷಣ ಸಂಯೋಜಕ ವೆಂಕಟರಮಣ ಕಲ್ಕೂರ್‌, ಸಿಆರ್‌ಪಿ ಪ್ರತಿಮಾ, ಮುಖ್ಯ ಶಿಕ್ಷಕ ಮುರಳೀಧರ ಭಟ್‌, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುಪ್ರೀತಾ ಶೆಟ್ಟಿ, ಶಿಕ್ಷಕರಾದ ಶರ್ಮಿಳ, ಹೇಮಲತಾ, ಜಯಶ್ರೀ ಬಿ. ಪೂಜಾರಿ, ವೀಣಾ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಸ್ಥಳೀಯ ಮುಖಂಡರು, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಮುರಳೀಧರ ಭಟ್‌ ಸ್ವಾಗತಿಸಿ, ಶರ್ಮಿಳ ನಿರೂಪಿಸಿ, ವಂದಿಸಿದರು.





























































































































































































































error: Content is protected !!
Scroll to Top