ರಾಂಚಿ : ರೋಪ್ವೇನಲ್ಲಿ ಎರಡು ಕೇಬಲ್ ಕಾರ್ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭಯಾನಕ ಅವಘಡದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ. ಜಾರ್ಖಂಡ್ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ್ ದೇವಸ್ಥಾನದ ಸಮೀಪದ ತ್ರಿಕೂಟ ಬೆಟ್ಟದಲ್ಲಿ ಭಾನುವಾರ ಈ ದುರಂತ ಉಂಟಾಗಿದೆ.
ರೋಪ್ವೇನಲ್ಲಿ ಕನಿಷ್ಠ 12 ಕ್ಯಾಬಿನ್ಗಳಲ್ಲಿ ಇನ್ನೂ 48 ಮಂದಿ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ ಸಹಾಯದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದ ಕೇಬಲ್ ಕಾರುಗಳ ಡಿಕ್ಕಿ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಈ ಅವಘಡಕ್ಕೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ಅಪಘಾತದ ಬಳಿಕ ರೋಪ್ವೇ ಮ್ಯಾನೇಜರ್ ಮತ್ತು ಇತರೆ ಉದ್ಯೋಗಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ದಳದ (ಎನ್ಡಿಆರ್ಎಫ್) ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದಿಯೋಘರ್ ಜಿಲ್ಲಾಧಿಕಾರಿ ಮಂಜುನಾಥ ಭಜಂತ್ರಿ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯರು ಕೂಡ ನೆರವು ನೀಡುತ್ತಿದ್ದಾರೆ.
ತ್ರಿಕೂಟ್ ರೋಪ್ವೇ ಭಾರತದ ಅತ್ಯಂತ ಉದ್ದನೆಯ ರೋಪ್ವೇ ಆಗಿದೆ. ಬಾಬಾ ಬೈದ್ಯನಾಥ್ ದೇವಸ್ಥಾನದಿಂದ ಸುಮಾರು 20 ಕಿಮೀ ದೂರದಲ್ಲಿ ಈ ರೋಪ್ವೇ ಇದೆ. 766 ಮೀಟರ್ ಉದ್ದ ಮತ್ತು 392 ಮೀಟರ್ ಎತ್ತರದಲ್ಲಿದೆ. ರೋಪ್ವೇನಲ್ಲಿ 25 ಕ್ಯಾಬಿನ್ಗಳಿವೆ. ಪ್ರತಿ ಕ್ಯಾಬಿನ್ನಲ್ಲಿ ನಾಲ್ವರು ಕೂರಬಹುದು. ಇದು ಬಹಳ ಎತ್ತರದಲ್ಲಿ ಇರುವುದರಿಂದ ಮಧ್ಯೆ ಸಿಲುಕಿರುವ ಕ್ಯಾಬಿನ್ಗಳಿಂದ ಜನರನ್ನು ಹೊರಗೆ ತೆಗೆಯುವುದು ಸವಾಲಿನ ಕೆಲಸವಾಗಿದೆ. ಹೆಲಿಕಾಪ್ಟರ್ಗಳ ಸಹಾಯದಿಂದ ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ.
ಕೇಬಲ್ ಕಾರ್ಗಳ ಡಿಕ್ಕಿ – ಕನಿಷ್ಠ 2 ಸಾವು
Recent Comments
ಕಗ್ಗದ ಸಂದೇಶ
on