ಬೆಂಗಳೂರು : ಕಾರ್ಕಳ ಮತ್ತು ಮೂಡುಬಿದ್ರೆ ಪ್ರದೇಶಗಳನ್ನು ಕೇಂದ್ರ ಸರಕಾರದ ಜೈನ್ ಸರ್ಕ್ಯೂಟ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.
ವಿಧಾನ ಸಭೆಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಅವರ ಪ್ರಸ್ತಾವಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪರವಾಗಿ ಮಾತನಾಡಿದ ಅವರು ಕಾರ್ಕಳ ಮತ್ತು ಮೂಡುಬಿದಿರೆಯನ್ನು ಜೈನ್ ಸರ್ಕ್ಯೂಟ್ ಯೋಜನೆಯಡಿ ಸೇರಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.
ಸಸಿಹಿತ್ಲು ಬೀಚ್ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ
ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲು ಬೀಚ್ ಅಭಿವೃದ್ಧಿಗೆ ಸಿಆರ್ಝೆಡ್ ಅನುಮತಿ ಪಡೆಯಲು ಸರಕಾರ ಯತ್ನಿಸುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವುದು ಸರಕಾರದ ಉದ್ದೇಶ. ಈಗಾಗಲೇ ಸಸಿಹಿತ್ಲಿನಲ್ಲಿ ಜೆಎಲ್ಆರ್ ಸಂಸ್ಥೆಯ ವತಿಯಿಂದ 5.36 ಕೋಟಿ ರೂ. ವೆಚ್ಚದಲ್ಲಿ ಸರ್ಫಿಂಗ್ ಮತ್ತಿತರ ಪ್ರವಾಸೋಧ್ಯಮಕ್ಕೆ ಪೂರಕವಾದ ಅಭಿವೃದ್ಧಿಗೆ ತಾತ್ಕಾಲಿಕವಾದಂತಹ ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.