ಬೆಂಗಳೂರು : ವಾಸ್ತವ್ಯ ಪ್ರಮಾಣಪತ್ರ ಇಲ್ಲದ ಕಾರಣಕ್ಕೆ ವಿದ್ಯುತ್ ಸಂಪರ್ಕ ಕೊಡಲು ನಿರಾಕರಿಸಿದ್ದ ಸುಮಾರು 5 ಲಕ್ಷ ಜನರ ಮನೆಗೆ ವಿದ್ಯುತ್ ನೀಡುವ ಕಾರ್ಯಕ್ಕೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ನಿಯಮ ಉಲ್ಲಂಘನೆಯ ನೆಪದಿಂದ ವಸತಿ ಸಮುಚ್ಚಯಗಳಿಗೆ ವಾಸ್ತವ್ಯ ಪ್ರಮಾಣ ಪತ್ರವನ್ನು ನೀಡಲು ಬಿಬಿಎಂಪಿ ನಿರಾಕರಿಸಿದ ಹಿನ್ನೆಲೆ ನಗರ ಬಿಜೆಪಿ ಶಾಸಕರು ನಿಯಮ ಬದಲಾವಣೆಗೆ ಮನವಿ ಸಲ್ಲಿಸಿದ್ದರು. ಬೆಳಕು ಯೋಜನೆ ನಗರ ಪ್ರದೇಶದ ವಿದ್ಯುತ್ ವಂಚಿತರಿಗೂ ಸಂಪರ್ಕ ಕಲ್ಪಿಸುವ ಯೋಜನೆಯಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ವಿದ್ಯುತ್ ಸಂಪರ್ಕ ನೀಡುವ ಪ್ರಸ್ತಾಪಕ್ಕೆ ಒಪ್ಪಿಗೆ ಪಡೆಯಲಾಗಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಹೇಳಿದರು.